ಗುರುವಾರ, ಜನವರಿ 26, 2012

ಮುಂದುವರಿದವರು......

ಸತ್ಯ ಸಹನೆ ಶಾಂತಿ ಮಂತ್ರಗಳೇ  ನಮ್ಮ ಅಸ್ತ್ರ ಎನ್ನುತ್ತೇವೆ
ಕೆಟ್ಟ ಹಸಿವೆಗೆ,ನಮ್ಮ ಸ್ವಾರ್ಥಕೆ ನಮ್ಮವರನ್ನೇ ಕಿತ್ತು ತಿನ್ನುತ್ತೇವೆ

ದೇಶ ಪ್ರೇಮ,ಭಾಷಾಭಿಮಾನ,ಜಾತ್ಯಾತೀತತೆಯ ನುಡಿಯುತ್ತೇವೆ
ಕೊನೆಯಿರದ ದಾಹಕ್ಕೆ ಕೊನೆಗೆ ಹಸಿರಕ್ತವನ್ನಾದರೂ ಕುಡಿಯುತ್ತೇವೆ

ಅಸಾಧ್ಯ,ಅಗೋಚರ ಭವಿಷ್ಯಗಳ'ದಿವ್ಯ'ದೃಷ್ಟಿಯಲ್ಲಿ ಕಾಣುತ್ತೇವೆ
ಕಣ್ಣೆದುರಿನ ಕೊಲೆ,ಅತ್ಯಾಚಾರ ಹಿಂಸೆಗಳಿಗೆ ಕುರುಡರಾಗುತ್ತೇವೆ

ನೆಟ್,ಮೊಬೈಲ್,ಚಾಟ್ ನಲ್ಲಿ ಅಪರಿಚಿತರಲ್ಲೂ ಮಾತನಾಡುತ್ತೇವೆ
ಮನೆಯ ಮೂಲೆಯಲ್ಲಿನ ಹಿರಿಯರೆಂದರೆ ಮೂಕರಾಗುತ್ತೇವೆ

ಊರಿನ ಆಗುಹೋಗು,ಕ್ರಿಕೆಟ್ ಸ್ಕೋರ್ ತಡವಿಲ್ಲದೆ ಕೇಳುತ್ತೇವೆ
ದೀನರ ಅಳಲು,ಆಕ್ರಂದನ ನೋವುಗಳಿಗೆ ಕಿವುಡರಾಗುತ್ತೇವೆ

ಮುಗಿಲೆತ್ತರಕೆ ಹಾರುತ್ತೇವೆ,ಚಂದ್ರಮಂಗಳಗಳ ಮುಟ್ಟುತ್ತೇವೆ
ಜಾತಿ ಧರ್ಮ,ಮಠಮಂದಿರಗಳ ಹೆಸರಿನಲ್ಲಿಗೋರಿ ಕಟ್ಟುತ್ತೇವೆ

ಬಡವರ ಅನಾಥರ ಬೆವರಿನಲ್ಲಿ ಸೌಧ ಬಂಗಲೆಗಳ ಕಟ್ಟುತ್ತೇವೆ
ನೆಮ್ಮದಿ ಸುಖ ಸಂತೋಷ ಸಂಬಂಧಗಳ ದೂರ ಅಟ್ಟುತ್ತೇವೆ

ಸ್ವರ್ಗವೆಂಬುದ ಇಲ್ಲಿಯೇ ಬಿಟ್ಟು ನರಕದ ಬಾಗಿಲು ತಟ್ಟುತ್ತೇವೆ
ಎಷ್ಟೊಂದು ಮುಂದುವರಿದಿದ್ದೇವೆ ನಾವು..?!

ಮಂಗಳವಾರ, ಜನವರಿ 3, 2012

'ನಿನ್ನ' ಬಗ್ಗೆ ಅನಿಸಿದ್ದು.....

ನೀ ನನ್ನ ಬದುಕಿನಲ್ಲಿ
ಕಳೆದು ಹೋದಾಗಿನಿಂದ
ಅಲ್ಲಿ ಬರಿಯ ಏಕಾಂತ
ನಿಶ್ಯಬ್ಧ.... ನೀರವ...
ಗೆಳತೀ ನೀನೆಂದಿಗೂ
ನನ್ನವಳೆಂದೂ ಗೊತ್ತಿದ್ದು
ನೀ ಬಯಸಿರುವ
ಕನಸಿನ ಹುಡುಗ ಯಾರವ?!

**********

ನೀ ನಿನ್ನೊಳಗೆ ಮುಚ್ಚಿಟ್ಟ
ಬಿಚ್ಚಿಡಲಾಗದೆ ಎದೆಯೊಳಗೆ
ಬಚ್ಚಿಟ್ಟ
ಬೆಚ್ಚಗಿನ ಹೊಚ್ಚ ಹೊಸ ಭಾವಗಳು
ಆ ಕಣ್ಣಂಚಲ್ಲಿ ಕಿಚ್ಚು ಹಚ್ಚಿ
ಹುಚ್ಚೆಬ್ಬಿಸಿ
ನನ್ನೆದೆಯಲ್ಲಿ ಹಚ್ಚ ಹಸುರಾಗಿ
ಅಚ್ಚೊತ್ತಿದ ಮೇಲೆ 
ನಾ ನಿನ್ನ ಮೆಚ್ಚಿದ್ದು ಹೆಚ್ಚೇ..??

***********

ಸುಟ್ಟು ಹೋದ ಹೃದಯದಲ್ಲಿ
ಈಗ ಬೆಳಕೆಲ್ಲಿ?
ನೀ ನಿಟ್ಟು ಹೋದ ಮೇಲೆ
ಕೊಳ್ಳಿ..!
ಬರಡು ಭೂಮಿಯಲ್ಲಿ
ಹೇಗೆ ಹೂ ಬಿಟ್ಟೀತು ಗೆಳತಿ
ನೀ ನೆಟ್ಟ ಬಳ್ಳಿ ?

************

ಜೀವನವೆಂದರೆ
ನೆನಪುಗಳ ಜೊತೆಗೆ
ಕನಸುಗಳು ಬೇಕಂತೆ
ಗೆಳತೀ..ನೀ
ನನ್ನವಳಾಗದಿದ್ದರೇನಂತೆ?
ಜೊತೆಯಿರಲು ಸದಾ
ಕಾಡುವ ನೆನಪುಗಳ ಕಂತೆ
ನಿನ್ನ ಮರೆಯಲಾಗದ
ಬದುಕೀಗ ನಿತ್ಯ
ಕನಸುಗಳ ಸಂತೆ..

***********

ನನ್ನೆದೆಯಂಗಳದಲ್ಲಿ ನೀ
ಹಕ್ಕಿಯಂತೆ ನಲಿದಾಡುತ್ತಿದ್ದು
ಹಾರಿ ಹೋದ ಮೇಲೆ ದೂರ
ಅಲ್ಲಿ ಉಳಿದದ್ದು
ನೀನಿಟ್ಟ ಹೆಜ್ಜೆಗಳು ಮೂಡಿಸಿದ
ಆ ಗೆಜ್ಜೆ ಸದ್ದು

************

ಮೊದಲ ಮಳೆ ಹನಿಗೆ
ಕಾದ ಭುವಿಯಂತೆ
ಈ ಪ್ರೀತಿ ಎಂಬುದನ್ನು
ಗೆಳತಿ ನೀನ್ಯಾಕೆ ಅರಿಯೆ?
ಹೃದಯದಲ್ಲಿ ನೂರಾಸೆ ಕನಸುಗಳ
ಕಿಡಿ ಹೊತ್ತಿಸಿದ ನೀನು
ಬೆಳಕಾಗುವ ಮೊದಲೇ
ನೀರೆರಚಿದ್ದು ಸರಿಯೇ..?!

************