ಗುರುವಾರ, ಆಗಸ್ಟ್ 19, 2010

ಮೋಡಗಳು ಸರಿದಾಗ.....

(ಮಂಗಳ ವಾರಪತ್ರಿಕೆ 10.06.2009ರಲ್ಲಿ ಪ್ರಕಟವಾದ ಕಥೆ)

ಆ ದಿನ ಹೊತ್ತು ಕಳೆದು ಬೆಳಗಾದರೂ ಇನ್ನೂ ಸೂರ್ಯನ ಸುಳಿವೇ ಇರಲಿಲ್ಲ.ಮುಸುಕಿದ ಮಂಜು ಸೂರ್ಯನನ್ನು ಮರೆಮಾಡಿತ್ತು.ಇನ್ನೂ ಬೆಳಕು ಹರಿದಿಲ್ಲವೆಂದು ಮನದಲ್ಲೇ ಗೊಣಗುತ್ತಾ ಮಗ್ಗುಲು ಬದಲಿಸಿ ಮತ್ತೆ ಕಂಬಳಿ ಹೊದ್ದು ಮಲಗಿದ ಸಂಗೀತಾಳಿಗೆ ತಾಯಿ ಬಂದು ಎಚ್ಚರಿಸಿದಾಗಲೇ ವಾಸ್ತವದ ಅರಿವಾದದ್ದು. ದಡಬಡನೆ ಎದ್ದು ತಯಾರಾಗಿ ಕೆಲಸಕ್ಕೆಹೊರಟಾಗ ಸಮಯ ಸರಿಯಾಗಿ ಎಂಟೂವರೆ.ಇನ್ನರ್ಧ ತಾಸಿನಲ್ಲಿ ಆಫೀಸು ತಲುಪದಿದ್ದರೆ ಬೆಳಿಗ್ಗೆಯೇ ಮ್ಯಾನೇಜರ್ ಕೈಯಿಂದ ಮುಖಕ್ಕೆ ಮಂಗಳಾರತಿ ಮಾಡಿಸಿಕೊಳ್ಳಬೇಕಾಗುತ್ತೆ ಎಂದೆನ್ನುತ್ತಲೇ ಅವಸರಸರವಾಗಿ ಹೊರಡಲನುವಾದಳು.
ಸಂಗೀತಾ ಕೆಲಸ ಮಾಡುತ್ತಿದ್ದುದು ಖಾಸಗಿ ಕಂಪೆನಿಯೊಂದರಲ್ಲಿ. ತಿಂಗಳ ಕೊನೆಯಲ್ಲಿ ಬರುವ ಸಂಬಳ ತಾಯಿ ಹಾಗೂ ಇಬ್ಬರು ಚಿಕ್ಕ ತಂಗಿಯರ ಖರ್ಚಿಗೆ ಸಾಲದು,ಆದರೂ ನಿಭಾಯಿಸಬೇಕಾದ ಹಿರಿಯ ಜವಾಬ್ದಾರಿ ಹಿರಿಮಗಳಾದ ಅವಳ ಮೆಲಿತ್ತು."ಒಬ್ಬನೇ ಒಬ್ಬ ಗಂಡು ಮಗ ಇರಬಾರದಿತ್ತೆ?ಎಷ್ಟಾದರೂ ಮನೆಗೆ ಹಿರಿಮಗಳಾಗಿ ಹುಟ್ಟಬಾರದು,ಎಲ್ಲಾ ನಾವು ಪಡಕೊಂಡು ಬಂದಿದ್ದು"ಹೀಗೆ ಮನದಲ್ಲೇ ನೊಂದುಕೊಂಡಿದ್ದು ಎಷ್ಟೋ ಬಾರಿ..!
ಸುಮಾರು ನಾಲ್ಕು ವರ್ಷಗಳಿಂದ ಒಂದೇ ಕಡೆ ಕೆಲಸಮಾಡುತ್ತಿರಬೇಕಾದರೆ ಆಕೆ ಆ ಕಛೇರಿಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದಳು.ಎಲ್ಲರೊಂದಿಗೂ ಆಕೆ ಹೊಂದಿಕೊಂಡಉ ಹೋಗಿದ್ದಳು.ಅದರಲ್ಲೂ ಸಹೋದ್ಯೋಗಿ ಗಿರೀಶನ ಜತೆ ತುಸು ಹೆಚ್ಚಿನ ಸಲುಗೆ.ಅವನೂ ಒಳ್ಳೆಯವನೇ,ಕೈ ತುಂಬಾ ಸಂಬಳ,ಅಷ್ಟೇ ಸಭ್ಯ.ಇವಳನ್ನು ಆಕರ್ಷಿಸಿದ್ದ.ಯಾರನ್ನೂ ಒಂದುಕ್ಷಣ ಮೋಡಿ ಮಾಡುವಂತಹ ಅವಳ ನಗು ಅವನಿಗೂ ಹುಚ್ಚು ಹಿಡಿಸಿತ್ತು.ಸದಾ ಮುಗುಳ್ನಗುತ್ತಿರುವ ಅವಳ ಮುಖದಲ್ಲಿ ದುಗುಡ ಸಿಟ್ಟು ತುಂಬಿಕೊಂಡಿರುವುದನ್ನು ಕಾಣುವುದೇ ಅಪರೂಪ.ಹೀಗೆ ಪರಸ್ಪರ ಮೆಚ್ಚಿಕೊಂಡು ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು.ಮೊದಮೊದಲು ಮನೆಯಲ್ಲಿ ಅವಳ ತಾಯಿ ನಿರಾಕರಿಸಿ"ನೋಡು ಸಂಗೀತಾ ನೀನು ತಪ್ಪು ಮಾಡುತ್ತಿದ್ದೀಯಾ!ಅವರು ಶ್ರೀಮಂತರು.ಅವರಿಗೂ ನಮಗೂ ಎಲ್ಲಿಂದೆಲ್ಲಿಯ ಹೋಲಿಕೆ?ನಾಳೆ ನಡುನೀರಿನಲ್ಲಿ ಕೈಬಿಟ್ಟರೆ ನಮ್ಮ ಗತಿಯೇನು?ನಿನಗೆ ಇನ್ನೂ ಮದುವೆಯಾಗದ ತಂಗಿಯಂದಿರಿದ್ದಾರೆಂಬುದನ್ನು ಮರೆಯಬೇಡ"ಎಂದು ಬಲವಾಗಿಯೇ ತಳ್ಳಿಹಾಕಿದ್ದರು.ಆದರೆ ಸಂಗೀತಾಳಿಗೆ ಗಿರೀಶನ ಮೇಲೆ ತುಂಬು ವಿಶ್ವಾಸವಿತ್ತು.ಕೈ ಬಿಡಲಾರನೆಂಬ ಭರವಸೆಯಿತ್ತು.ಅದೊಂದು ದಿನ ಗಿರೀಶನೇ ಬಂದು ಅವಳ ತಾಯಿಯಯಲ್ಲಿ ವಿಷಯ ಪ್ರಸ್ತಾಪಿಸಿದಾಗ ಮಗಳ ಭವಿಷ್ಯದ ದೃಷ್ಟಿಯಿಂದ ಒತ್ತಾಯಕ್ಕೆ ಕಟ್ಟು ಬೀಳಬೇಕಾಯಿತು.ಅವನ ಮನೆಯಿಂದಲೂ ಒಪ್ಪಿಗೆ ದೊರೆತು ಇಬ್ಬರೂ ಹೊಸ ಬದುಕಿಗೆ ಅಡಿಯಿರಿಸಿದ್ದರು.ಮದುವೆಯಾಗಿ ಮನೆಯಿಂದ ಹೊರಬಂದಿದ್ದರೂ ಸಂಗೀತಾ ತನ್ನ ತಾಯಿ ತಂಗಿಯರನ್ನು ಮರೆತವಳಲ್ಲ.ಗಿರೀಶನೂ ಅಷ್ಟೇ ಅವರ ಸುಖದುಃಖಗಳಲ್ಲಿ ಸಮವಾಗಿ ಭಾಗಿಯಾಗುತ್ತಿದ್ದ.ತನ್ನ ಹೆಂಡತಿ ನೌಕರಿಯೆಂದು ಸಂಜೆಯ ತನಕ ಆಫೀಸಿನಲ್ಲಿ ಜೀವ ತೇಯುವುದು,ಜೊತೆಗೆ ಮನೆ ಕೆಲಸದಲ್ಲಿ ಒದ್ದಾಡುವುದನ್ನು ಅವನ ಕೈಲಿ ನೋಡಲಾಗದೆ ಅವಳನ್ನು"ನೀನು ಮನೆಯಲ್ಲಿ ಆರಾಮಾಗಿರು.ಈಗ ನನ್ನೊಬ್ಬನ ದುಡಿಮೆ ನಮಗಿಬ್ಬರಿಗೆ ಬೇಕಾದಷ್ಟು ಆಗುತ್ತೆ.ನಿನ್ನನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು,ಮನೆಯ ಕಡೆ ನೋಡಿಕೊಂಡಿರು" ಎಂದಿದ್ದ.
ಈ ರೀತಿ ಬಹಳ ಸುಗಮವಾಗಿಯೇ ಸಾಗುತ್ತಿದ್ದ ಅವರ ಸಂಸಾರದಲ್ಲಿ ಬರಸಿಡಿಲೊಂದು ಬಂದೆರಗಿತ್ತು.ಅವರ ಮದುವೆಯಾಗಿ ಒಂದುವರ್ಷ ತುಂಬಲು ಎರಡು ದಿನ ಉಳಿದಿತ್ತು.ಅಂದು ಕಂಪೆನಿಯ ಕೆಲವು ಸಹೋದ್ಯೋಗಿ ಗೆಳೆಯರೊಡನೆ ಸೇರಿ ಪಿಕ್ ನಿಕ್ ಗೆಂದು ಗೋವಾ ತೆರಳಿದ್ದ ಗಿರೀಶ್ ಮರಳಿ ಬರಲೇ ಇಲ್ಲ. ಮೋಜಿಗೆಂದು ಈಜಾಡಲು ಹೋದ ಆತ ಆ ವಿಶಾಲ ಕಡಲ ಅಲೆಗಳಲ್ಲಿ ಒಂದಾಗಿ ಹೋದವನು ಶವವಾಗಿ ಸಿಕ್ಕಿದ್ದು ಮರುದಿನ.
ಇಷ್ಟೆಲ್ಲಾ ಆದರೂ ಸಂಗೀತಾಳಿಗೆ ಇದು ಯಾವುದರ ಅರಿವೇ ಇರಲಿಲ್ಲ.ಅಂದೇ ಅವರ ವಿವಾಹ ವಾರ್ಷಿಕೋತ್ಸವ.ಆಕೆ ಮದುಮಗಳಂತಾಗಿದ್ದಳು,ಆದರೆ ಮುನ್ನಾದಿನವೇ ಬರುತ್ತೇನೆ ಅಂದಿದ್ದ ಗಿರೀಶನ ಪತ್ತೆಯೇ ಇರಲಿಲ್ಲ.ಒಂದೆಡೆ ಮನೆಯಲ್ಲಿ ನೆಂಟರ ಗದ್ದಲ.ಆಕೆಗೋ ಆತನನ್ನು ಒಮ್ಮೆ ಕಾಣುವ ಹಂಬಲ!ದಾರಿ ಕಾಯುತ್ತಿದ್ದಂತೆ ವ್ಯಾನೊಂದು ಬಂದು ಮನೆ ಮುಂದೆ ಗಕ್ಕನೆ ನಿಂತಾಗ ಅವಳ ಆತಂಕ ನೂರು ಪಟ್ಟಾಗಿತ್ತು.ತಾನು ಜೀವವೇ ಇಟ್ಟುಕೊಂಡಿದ್ದ ಗಿರೀಶ್ ಜೀವ ಕಳೆದುಕೊಂಡು ಅದರಲ್ಲಿ ಮಲಗಿರುವುದನ್ನು ಕಂಡ ಆಕೆಗೆ ಆ ದುಃಖವನ್ನು ಅರಗಿಸಿಕೊಳ್ಳುವ ಶಕ್ತಿ ಇರಲಿಲ್ಲ.ಗಿರೀಶನನ್ನು ಕಳೆದುಕೊಂಡ ಆಕೆ ಇನ್ನು ತನ್ನ ಬದುಕಿಗೆ ದಿಕ್ಕಿಲ್ಲವೆಂದು ನೆನೆದು ಕಂಗೆಟ್ಟವಳಾಗಿದ್ದಳು.ತಮ್ಮಿಬ್ಬರ ಸುಮಧುರ ದಾಂಒತ್ಯದ ಫಲ ಹೊಟ್ಟೆಯಲ್ಲಿ ಮೊಳಕೆಯೊಡೆಯುತ್ತಿರುವುದನ್ನು ನೆನೆದು ,ಭವಿಷ್ಯದ ಬಗೆಗೆ ಯೋಚಿಸಿ ಆಕೆಗೆ ದುಃಖ ಒತ್ತರಿಸಿಕೊಂಡು ಬರುತ್ತಿತ್ತು.ಕ್ರಮೇಣ ಎಲ್ಲರ ಸಮಾಧಾನ ಸಾಂತ್ವನದ ಫಲವಾಗಿ ಆಕೆ ಮತ್ತೆ ಮೊದಲಿನಂತಾಗಲು ಬಹಳ ಕಾಲವೇ ಹಿಡಿದಿತ್ತು.
ಈ ಕಾಲವೇ ಹೀಗೆ ಕ್ರಮೇಣ ಎಲ್ಲವನ್ನೂ ಮರೆಸುತ್ತದೆ.ಗಿರೀಶ್ ಇನ್ನಿಲ್ಲವಾಗಿ ಸುಮಾರು ಒಂದು ವರ್ಷವಾಗುತ್ತ ಬಂದಿದೆ.ಈಗ ಮತ್ತೆ ನೌಕರಿ ಮಾಡುವ ಅನಿವಾರ್ಯತೆ ಅವಳ ಪಾಲಿಗೆ ಬಂದಿತ್ತು.ಜೊತೆಯಲ್ಲೊಂದು ಮಗು,ಆ ಮಗುವಿನ ಲಾಲನೆ ಪಾಲನೆಯಲ್ಲಿ ಅವಳ ಎಲ್ಲಾ ದುಃಖ ನೋವು ಮರೆಯಾಗಿ ಹೋಗುತ್ತಿತ್ತು.ಹೀಗೆ ಎಲ್ಲಾ ಕಹಿ ನೆನಪುಗಳನ್ನು ಮರೆತು ಮತ್ತೆ ಹೊಸ ಹುರುಪಿನಿಂದ ಕೆಲಸಕ್ಕೆ ಹೊರಡಲು ಅವಳು ಸಿದ್ಧಳಾಗಿದ್ದಳು.
ಸಂಗೀತಾ ಪ್ರತೀದಿನ ಇದೇ ಸಮಯಕ್ಕೆ ಬಂದು ಬಸ್ಸಿಗಾಗಿ ಕಾಯುವುದು ರೂಢಿ.ವಿನಯ್ ಕೂಡಾ ಅದೇ ಸಮಯಕ್ಕೆ ಬಸ್ಸಿಗಾಗಿ ಅಲ್ಲೇ ಕಾಯುತ್ತಿದ್ದ.ಇಬ್ಬರೂ ಒಂದೇ ಕಡೆ ಹೋಗಬೇಕಾಗಿದ್ದರೂ ಬೇರೆ ಬೇರೆ ಆಫೀಸಿಸುಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಕೇವಲ ಮುಖ ಪರಿಚಯವಾಗಿ ಬಹಳ ದಿನಗಳಾಗುತ್ತ ಬಂದಿತ್ತು.ಅದೊಂದು ದಿನ ಬಸ್ಸಿನಲ್ಲಿ ಕಳೆದು ಹೋಗಿದ್ದ ಅವಳ ಪರ್ಸನ್ನು ಮರುದಿನ ಆತ ಮರಳಿ ತಂದೊಪ್ಪಿಸಿದಾಗ ಇಬ್ಬರ ನಡುವೆ ಮಾತುಕತೆಗೆ ದಾರಿ ಏರ್ಪಟ್ಟಿತ್ತು.ಜೊತೆಗೆ ಅವನ ಮೇಲೆ ಗೌರವ ವಿಶ್ವಾಸವೂ ಮೂಡಿತ್ತು.ಹೀಗೆ ಪರಸ್ಪರ ಪರಿಚಯವಾದ ನಂತರ ಇಬ್ಬರೂ ಒಳ್ಳೆಯ ಗೆಳೆಯರಂತಿದ್ದರು. ವಿನಯನೂ ಸ್ಫುರದ್ರೂಪಿ ಯುವಕ.ಇವಳೂ ಅಷ್ಟೇ,ಇನ್ನೂ ಮೂವತ್ತು ದಾಟಿಲ್ಲ.ಅಂದಿನಿಂದಲೇ ಅವನು ಮನಸ್ಸಿನಲ್ಲಿಯೇ ಇವಳನ್ನು ಮೆಚ್ಚಿಕೊಂಡಿದ್ದ.ತಕ್ಕ ಸಮಯ ಬಂದಾಗ ಹೇಳಿದರಾಯಿತು ಎಂದುಕೊಂಡಿದ್ದ.ಆಕೆಗೂ ಅಷ್ಟೇ ಅವನ ನಡತೆ ಸೌಮ್ಯ ಸ್ವಭಾವ ಇಷ್ಟವಾಗಿತ್ತು.ಅವಳಿಗೆ ಒಂಟಿ ಬದುಕಿನಲ್ಲಿ ಒಬ್ಬ ಆತ್ಮೀಯ ಸ್ನೇಹಿತ ಸಿಕ್ಕಂತಾಗಿತ್ತು.
ಒಂದು ದಿನ ವಿನಯ್ ಜೊತೆ ರೆಸ್ಟೋರೆಂಟಲ್ಲಿ ಕುಳಿತು ಕಾಫಿ ಕುಡಿಯುತ್ತಿರಬೇಕಾದರೆ ವಿನಯ್ ತನ್ನ ಮನಸ್ಸಿನಲ್ಲಿರುವುದನ್ನು ಸಂಗೀತಾಳ ಬಳಿ ಧೈರ್ಯ ಮಾಡಿ ಹೇಳಿಯೇ ಬಿಟ್ಟಿದ್ದ.ಇದನ್ನು ಕೇಳಿದ ಆಕೆಗೆ ಒಂದುಕ್ಷಣ ಆಶ್ಚರ್ಯ ಆಘಾತ ಒಮ್ಮೆಗೇ ಉಂಟಾಗಿತ್ತು.ನಾನು ಇಷ್ಟು ದಿನವಾದರೂ ನನ್ನ ಬದುಕಿನ ಹಿನ್ನೆಲೆ ಬಗ್ಗೆ ಅವನ ಬಳಿ ಹೇಳದಿದ್ದುದೇ ತಪ್ಪಾಯಿತೇ?ನಾನೀಗಲೇ ಒಬ್ಬ ವಿಧವೆ,ಅಲ್ಲದೇ ಒಂದು ಮಗುವಿನ ತಾಯಿ,ನನಗೀಗ ಮದುವೆಯೇ!?ಈ ಸಮಾಜವಾದರೂ ನನಗೆ ಏನೆನ್ನಬಹುದು?ಮಿಗಿಲಾಗಿ ಸತ್ಯ ಸಂಗತಿ ತಿಳಿದರೆ ವಿನಯ್ ಕೂಡಾ ಒಪ್ಪಲಾರ.ಆಕೆ ಏನೊಂದು ತೋಚದೆ ಗೊಂದಲಕ್ಕೀಡಾಗಿದ್ದಳು.ಅವಳಲ್ಲಿ ಯೋಚನೆಗಳ ಮಹಾಪೂರವೇ ಎದ್ದಿತ್ತು.ನೈಜ ಸಂಗತಿ ತಿಳಿದರೆ ಈತ ತನ್ನಿಂದ ದೂರಾಗಬಹುದು.ಇವನನ್ನು ಕಳೆದುಕೊಂಡರೆ ಒಬ್ಬ ಆತ್ಮೀಯನನ್ನು ಕಳೆದುಕೊಂಡಂತೆ ಮನದಲ್ಲೇ ಅಂದುಕೊಳ್ಳುತ್ತಾ ಮದುವೆಯ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ,ಸ್ವಲ್ಪ ಕಾಲಾವಕಾಶ ಕೊಡಿ.ಯೋಚಿಸಿ ನಿರ್ಧರಿಸಿ ಹೇಳುತ್ತೇನೆ ಎಂದಷ್ಟೆ ಹೇಳಿ ಜಾರಿಕೊಂಡಿದ್ದಳು.
ಬಹಳ ದಿನಗಳವರೆಗೆ ಯೋಚನೆ ಮಾಡಿ ತನ್ನ ಬದುಕಿನ ಎಲ್ಲಾ ನಿಜ ಸಂಗತಿಗಳನ್ನು ಇವನ ಬಳಿ ಹೇಳಿ ಅವನಿಂದ ದೂರ ಇರಬೇಕೆಂದುಕೋಂಡಳು. ಅದಕ್ಕಾಗಿ ಒಂದು ದಿನ ವಿನಯನನ್ನು ಕರೆದು "ನೋಡಿ ವಿನಯ್,ನೀವು ನನ್ನಲ್ಲಿ ಅದೇನು ಕಂಡು ಮೆಚ್ಚಿದ್ದೀರೋ ಗೊತ್ತಿಲ್ಲ.ನಾನು ನಿಮ್ಮನ್ನು ಒಳ್ಳೆಯ ಸ್ನೇಹಿತನಂತೆ ಕಂಡಿದ್ದೇನೆ.ಆದರೆ ನಿಮ್ಮನ್ನು ಮದುವೆಯಾಗಿ ನಿಮ್ಮ ಬದುಕಿಗೆ ಬೆಳಕಾಗಿ ಬರುವ ಭಾಗ್ಯವಂತೆ ನಾನಲ್ಲ.ಯಾಕೆಂದರೆ ನಾನೀಗಲೇ ಪತಿಯನ್ನು ಕಳೆದುಕೊಂಡ ನತದೃಷ್ಟೆ.ಒಂದು ಮಗುವಿನ ಜವಾಬ್ದಾರಿಯೂ ನನ್ನ ಮೇಲಿದೆ.ನೀವು ನನ್ನ ಬಗ್ಗೆ ಅದೇನು ಆಸೆ ಆಕಾಂಕ್ಷೆ ಇಟ್ಟುಕೊಂಡಿದ್ದೀರೋ ಅದೆಲ್ಲಾ ಸುಳ್ಳು.ಇಷ್ಟು ದಿನ ಸತ್ಯವನ್ನು ಮರೆಮಾಚಿದ್ದಕ್ಕೆ ಕ್ಷಮೆಯಿರಲಿ".ಎಂದು ಉಮ್ಮಳಿಸಿ ಬಂದ ದುಃಖವನ್ನು ಅದುಮುತ್ತಾ ಹೇಳಿದಳು.ಆದರೆ ವಿನಯನೂ ವಿಚಲಿತನಾಗದೆ ಅಷ್ಟೇ ಶಾಂತವಾಗಿ ಹೇಳಿದ,'ನಾನೂ ಕೂಡಾ ಏನೇನೋ ಕನಸು ಕಟ್ಟಿಕೊಂಡಿದ್ದೆ,ಮದುವೆಯಾಗಿ ಹೊಸ ಬದುಕು ರೂಪಿಸಬೇಕೆಂದು ಕೊಂಡಿದ್ದೆ.ಆದರೆ ಎಲ್ಲಾ ಮಣ್ಣುಪಾಲಾಗಿ ಹೋಯಿತು.ಇನ್ನುಈ ಮದುವೆ ಸಂಸಾರದ ಜಂಜಾಟವೇ ಬೇಡ,ಒಂಟಿಯಾಗಿ ಇದ್ದು ಬಿಡೋಣ ಅನ್ನಿಸಿ ಬಿಟ್ಟಿತ್ತು. ಆದರೆ ನಿಮ್ಮನ್ನು ನೋಡಿದಾಗಿನಿಂದ ಆ ಭಾವನೆಯೇ ಬದಲಾಗಿ ಬಿಟ್ಟಿತ್ತು.ಆ ನಿಮ್ಮ ನಗು,ಕಷ್ಟದಲ್ಲೂ ಎದೆಗುಂದದೆ ಸಂಸಾರ ನಿಭಾಯಿಸುವ ಪರಿ ನನಗೊಂದು ಹೊಸ ಹುರುಪು ತಂದುಕೊಟ್ಟಿತು.ನಾನು ನಿಮ್ಮ ಬಗ್ಗೆ ಎಲ್ಲಾ ತಿಳಿದುಕೊಂಡಿದ್ದೇನೆ,ಆದರೆ ನನ್ನ ಬಗ್ಗೆ ಏನು ತಿಳಿದಿದ್ದೀರೋ ಅದು ಸುಳ್ಲು'.ಎಂದಾಗ ಸಂಗೀತಾಳಿಗೆ ಒಂದೂ ಅರ್ಥವಾಗಲಿಲ್ಲ.ಅವನೇ ಮುಂದುವರಿದು"ನಾನೂ ಕೂಡಾ ವಿವಾಹಿತ,ಆದರೆ ವರ್ಷ ಕಳೆಯುವಷ್ಟರಲ್ಲಿ ನಮ್ಮಿಬ್ಬರ ಬಂಧನ ಬಿರುಕು ಬಿಟ್ಟಿತ್ತು.ಇದು ಅವಳಿಗಿಷ್ಟವಿರದಿದ್ದ ಮದುವೆಯೆಂದು ತಿಳಿದಾಗ ತಡವಾಗಿ ಹೋಗಿತ್ತು.ಮದುವೆ ಸಂಸಾರವೆಂದರೆ ಎರಡು ಮನಸುಗಳ ಬೆಸುಗೆ,ಇಲ್ಲದಿದ್ದರೆ ಅದೊಂದು ರೀತಿಯ ಬಂಧನ ಮಾತ್ರ.ಅಲ್ಲಿ ಇಬ್ಬರೂ ಸ್ವತಂತ್ರರು ಎಂದುಕೊಂಡಿರುವವನು ನಾನು.ಕೊನೆಗೊಂದು ದಿನ ಇಬ್ಬರೂ ಬೇರೆ ಬೇರೆಯಾಗಲು ನಿರ್ಧರಿಸಿದೆವು.ಆಕೆ ತಾನು ಇಷ್ಟಪಟ್ಟವನೊಂದಿಗೆ ಸ್ವಚ್ಚಂದವಾಗಿ ಹಾರಿ ಹೋದಳು"ಎಂದಾಗ ಅವನ ಹೃದಯ ಭಾರವಾಗಿತ್ತು.
ಈಗ ಸಂಗೀತಾಳ ಮನಸ್ಸಿನಲ್ಲಿ ವಿನಯನ ಬಗ್ಗೆ ಅನುಕಂಪ ಮೂಡತೊಡಗಿತ್ತು.ಅವನ ತ್ಯಾಗ ಔದಾರ್ಯದ ಬಗ್ಗೆ ಹೆಮ್ಮೆಯೆನಿಸಿತ್ತು.ಆಸರೆಯಿಲ್ಲದ ನನ್ನ ಬದುಕಿನಲ್ಲಿ ಜೊತೆಯಾಗಲು ಬರುತ್ತಿರುವ ಅವನನ್ನು ನಿರಾಕರಿಸುವುದರಲ್ಲಿ ಯಾವುದೇ ಅರ್ಥವಿಲ್ಲ.ವಿನಯನದೂ ತನ್ನಂತೇ ಒಂಟಿ ಬದುಕು,ಆದರೆ ಇನ್ನೊಂದು ಮದುವೆಯಾಗಲು ಇನ್ನೂ ಹುಡುಗಿಯರು ಸಿಗಬಹುದು.ನನ್ನನ್ನೇ ಒಪ್ಪಿಕೊಳ್ಳುವ ಅನಿವಾರ್ಯತೆ ಅವನಿಗೇನಿದೆ?ಬೆಂಗಾಡಾಗಿರುವ ನನ್ನ ಬದುಕಿನಲ್ಲಿ ನೆರಳಾಗುತ್ತಿರುವ ವಿನಯನನ್ನು ಪಡೆಯುತ್ತಿರಬೇಕಾದರೆ ನನ್ನ ಪುಣ್ಯವೇ ಸರಿ.ಇಬ್ಬರದೂ ಒಂದೇ ಮನಸು,ಒಂದೇ ಕನಸು.ಹೀಗಿರುವಾಗ ತಾನು ಅವನ ಕೈ ಹಿಡಿಯುವುದರಲ್ಲಿ ಯಾವುದೇ ತಪ್ಪಿಲ್ಲ.ಯೋಚಿಸಿ ಅವಳೊಂದು ನಿರ್ಧಾರಕ್ಕೆ ಬಂದಿದ್ದಳು.ಪರಸ್ಪರ ಒಪ್ಪಿಗೆಯಿತ್ತು ಇಬ್ಬರೂ ಕೈ ಹಿಡಿದು ನಡೆದು ಬಂದಾಗ ಬಾನಂಗಳದಲ್ಲಿ ಪೂರ್ಣಚಂದಿರ ನಗುತ್ತಿದ್ದ.

ಭಾನುವಾರ, ಆಗಸ್ಟ್ 8, 2010

ಒಂದು ತಿರುವು....

(ಮಂಗಳ ವಾರಪತ್ರಿಕೆ ಯುಗಾದಿ ಸಂಚಿಕೆ 2008ರಲ್ಲಿ ಪ್ರಕಟವಾದ ಕಥೆ)

ಮದುವೆಯಾಗಿ ಇನ್ನೂ ವರ್ಷವೇ ಕಳೆದಿರಲಿಲ್ಲ.ಅಷ್ಟರಲ್ಲಿಯೇ ನಮ್ಮಿಬ್ಬರ ನಡುವೆ ಅಡ್ಡಗೋಡೆ ಮೂಡಿತ್ತು.ಎರಡೂ ದುಡಿವ ಜೀವಗಳು,ಹಾಗಾಗಿ ಮನೆಯ ಜವಾಬ್ದಾರಿಯ ಬಗ್ಗೆ ಇಬ್ಬರಲ್ಲೂ ಗೊಂದಲ ಏರ್ಪಟ್ಟಿತ್ತು.ಸತಿಪತಿಯರಿಬ್ಬರೂ ಸಂಸಾರ ರಥದ ಚಕ್ರಗಳಿದ್ದಂತೆ,ಹೊಂದಿಕೊಂಡು ಹೋದಲ್ಲಿ ಮಾತ್ರ ಸುಖವಿದೆ ಎಂಬುದನ್ನು ತಿಳಿಯದರಷ್ಟು ದಡ್ಡರೇನಲ್ಲ!.ಇಬ್ಬರಿಗೂ ಒಂದು ರೀತಿಯ ಅಹಂ ಬಿಗುಮಾನ.ಅವಳು ನನ್ನನ್ನು ಅರ್ಥಮಾಡಿಕೊಂಡಿಲ್ಲವೋ,ಅಥವಾ ನಾನು ಅವಳನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿ ಬಿಟ್ಟಿದ್ದೇನೆಯೇ?,ಹೀಗೆ ಕಳೆದೆರಡು ವಾರಗಳಿಂದ ಮೂಡಿದ್ದ ನಮ್ಮಿಬ್ಬರ ನಡುವಿನ ಕಾರ್ಮೋಡ ಮರೆಯಾಗಿದ್ದು ಆ ರವಿವಾರ ಆಕೆ ತಲೆಸುತ್ತು ಬಂದಂತಾಗಿ ಬಿದ್ದು ಆಸ್ಪತ್ರೆಗೆ ಸೇರಿಸಿದಾಗಲೇ.ವೈದ್ಯರು ಪರೀಕ್ಷಿಸಿ ಗಾಬರಿ ಪಡುವಂತಹ ವಿಷಯವೇನಿಲ್ಲ,ನೀವು ಇನ್ನು ಇಬ್ಬರಲ್ಲ ಮೂವರಾಗುತ್ತಿದ್ದೀರಾ!ಎಂದಾಗ ಇಬ್ಬರ ಮುಖದಲ್ಲೂ ಮಿಂಚು ಮೂಡಿತ್ತು.
ಹೀಗೆ ಒಂದೆರಡು ದಿನ ಕಳೆದಿರಬೇಕು.ಊರಿನಿಂದ ತಂದೆಗೆ ಆರೋಗ್ಯ ಸರಿಯಿಲ್ಲವೆಂದು ತಾಯಿಯೇ ಫೋನ್ ಮಾಡಿದ್ದರು.ಅವರಿಗೆ ಹೀಗೆ ಹುಷಾರಿಲ್ಲದೆ
ಇರುವುದು, ಇದೇನು ಮೊದಲಬಾರಿಯಲ್ಲ.ಆದರೆ ತಾಯಿಯ ಧ್ವನಿಯಲ್ಲಿನ ದುಗುಡ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸುತ್ತಿತ್ತು.ತರಾತುರಿಯಿಂದಲೇ ಹೊರಟು ಬಂದರೂ ನಾನು ಬಂದಿದ್ದು ತಡವಾಗಿ ಹೋಗಿತ್ತು.ತಂದೆಯವರು ಇನ್ನಿಲ್ಲವಾಗಿ ಹೋಗಿದ್ದರು.ಹೀಗೆ ಅವರ ಕರ್ಮಾದಿಗಳನ್ನು ಮುಗಿಸಿ ಮತ್ತೆ ಮರಳಿ ಹೊರಟಾಗ ವಾರ ಕಳೆದಿತ್ತು.ಈಗ ತಾಯಿಯೊಬ್ಬಳೇ ಮನೆಯಲ್ಲಿ,ಅವಳನ್ನು ನೋಡಿಕೊಳ್ಳುವವರಿಲ್ಲ.ಅಕ್ಕ ಅವಳ ಸಂಸಾರದಲ್ಲಿ ಮುಳುಗಿ ಹೋಗಿದ್ದಳು. ನನಗೋ ಇರುವ ಕೆಲಸ ಬಿಟ್ಟು ಹೆಂಡತಿಯೊಡನೆ ಈ ಹಳ್ಳಿಯಲ್ಲಿ ಬಂದು ಸಂಸಾರ ಹೂಡುವ ಹಾಗಿಲ್ಲ,ಯಾಕೆಂದರೆ ಅವಳು ಹುಟ್ಟಿ ಬೆಳೆದದ್ದು ನಗರ ಜೀವನದಲ್ಲಿಯೇ.ಆಗ ಯೋಚನೆಗೆ ಬಂದು"ಈ ಜಾಗವನ್ನು ಯಾರಿಗಾದರೂ ಮಾರಿಬಿಟ್ಟು ನೀನು ನಮ್ಮೊಂದಿಗೆ ಬಾಮ್ಮಾ,ಈ ಹಳ್ಳಿಯಲ್ಲಿದ್ದೇನು ಮಾಡುತ್ತೀ! ನಿನಗೆ ಏನಾದರೂ ಆದಲ್ಲಿ ನಿನ್ನನ್ನು ನೋಡಿಕೊಳ್ಳಲು ಇಲ್ಲಿ ಯಾರಿದ್ದಾರೆ ಹೇಳು? ಅಲ್ಲಿ ನಮ್ಮೊಂದಿಗೆ ಆರಾಮವಾಗಿ ಇರಬಾರದಾ?!" ಎಂದು ತಾಯಿಯಯವರಲ್ಲಿ ವಿಷಯವೆತ್ತಿದಾಗ ಆಕೆಗೆ ದುಃಖ ಒತ್ತರಿಸಿಕೊಂಡು ಬಂದಿತ್ತು.ಅವಳೊಂದಿಗೆ ಇಷ್ಟು ವರ್ಷ ಉಸಿರಾಡಿದ ಆ ಮನೆ ದನ ಕರುಗಳು,ತಾನೇ ನೆಟ್ಟು ಈಗ ತನಗಿಂತಲೂ ಎತ್ತರ ಬೆಳೆದ ಆ ತೆಂಗು ಅಡಿಕೆ ಮರಗಳನ್ನು ಬಿಟ್ಟು ಬರುವುದನ್ನು ಅವಳಿಂದ ನೆನೆಸಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ.ನನ್ನನ್ನು ಬೇಸರಕ್ಕೀಡುಮಾಡಲಾಗದೆ ಆಕೆ 'ಇನ್ನೊಂದಿಷ್ಟು ದಿನ ಹೋಗಲಿ,ಇವೆಲ್ಲವನ್ನು ಬಿಟ್ಟು ಬರಲು ನನ್ನ ಮನಸ್ಸು ಒಪ್ಪುತ್ತಿಲ್ಲ,ಯೋಚಿಸಿ ಹೇಳುತ್ತೇನೆ' ಎಂದು ಕಣ್ಣೊರೆಸಿಕೊಂಡಾಗ ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ.
ಅದೊಂದು ದಿನ ಬೆಳಿಗ್ಗೆ ಎದ್ದವನೇ ಮುಖ ತೊಳೆಯುತ್ತಿರಬೇಕಾದರೆ ಮೊಬೈಲು ರಿಂಗಣಿಸುತ್ತಿತ್ತು.ಅತ್ತ ಅಮ್ಮ'ನಂದೂ..ನಾನು ಕಣೋ ನಿನ್ನಮ್ಮ,ನಾನು ನಿನ್ನಜೊತೆ ಇರ್ಬೇಕೂಂತ ಮನಸ್ಸು ಮಾಡಿದ್ದೀನಿ.ಆದರೆ ಈಮನೆ ತೋಟ ಎಲ್ಲ ಬೇರೆಯವರ ಪಾಲಾಗುವುದು ನನಗಿಷ್ಟವಿಲ್ಲ,ಹೇಗೂ ನಮ್ಮ ಅತ್ತಿಗೆ ಮತ್ತು ಮಕ್ಕಳು ಯಾರದೋ ಬಾಡಿಗೆ ಮನೆಯಲ್ಲಿ ದಿನ ಕಳೆಯುತ್ತಿದ್ದಾರೆ.ಸರಿಯಾದ ಕೆಲಸ ಕೂಡಾ ಇಲ್ಲ.ಅವರನ್ನು ಇಲ್ಲಿ ಕರೆದುಕೊಂಡು ಬಂದು ಮನೆಯ ಜವಾಬ್ದಾರಿ ವಹಿಸಿ ಬಿಟ್ಟರೆ ನಮಗೂ ಒಳ್ಳೆಯದಾಗುತ್ತದೆ ಎಂದು ಹೇಳಿದಾಗ ನಾನು ನನ್ನ ಕಿವಿಗಳನ್ನೇ ನಂಬದಾಗಿದ್ದೆ, ಯಾಕೆಂದರೆ ತಾಯಿ ಮತ್ತು ಅತ್ತಿಗೆಯಿಬ್ಬರೂ ಹಾವು ಮುಂಗುಸಿಯಂತೆ ಬದ್ಧವೈರಿಗಳು.ಒಬ್ಬರ ಮುಖ ಕಂಡರೆ ಇನ್ನೊಬ್ಬರಿಗಾಗುತ್ತಿರಲಿಲ್ಲ. ನಾವಿನ್ನೂ ಸಣ್ಣವರಿರುವಾಗ ನಮ್ಮ ಮನೆಯಲ್ಲಿನ ಬಡತನ ಕಂಡು ಅತ್ತೆಯವರು ತುಚ್ಛ ಭಾವದಿಂದಲೇ ನೋಡುತ್ತಿದ್ದರು,ಆದರೆ ಅವರ ಗಂಡ ಕುಡಿತ ಜೂಜಿಗೆ ಬಲಿಯಾದ ಮೇಲೆ ಇದ್ದುದೆಲ್ಲವೂ ಸಾಲದಲ್ಲಿ ಕೊಚ್ಚಿ ಹೋಗಿತ್ತು.
ಊರಿಗೆ ಹೋಗಿದ್ದಾಗ ತಾಯಿಯನ್ನು ಕರೆದು ಕೊಂಡು ಬಂದಾಗ ನನಗಿಂತಲೂ ನನ್ನವಳಿಗೇ ಹೆಚ್ಚು ಸಂತೋಷವಾಗಿತ್ತು. ನನ್ನ ತಾಯಿಯದು ಮೃದು ಮನಸ್ಸು ಮತ್ತು ಎಲ್ಲರನ್ನು ಅರ್ಥ ಮಾಡಿಕೊಳ್ಳಬಲ್ಲವಳಾಗಿದ್ದಳು. ಈಗ ಮನೆಗೊಂದು ಬಲ ಬಂದಂತಾಗಿತ್ತು.ನಾವಿಬ್ಬರೂ ಬೆಳಿಗ್ಗೆ ಮನೆ ಬಿಟ್ಟರೆ ಮತ್ತೆ ಗೂಡು ಸೇರುವುದು ಸೂರ್ಯ ಮುಳುಗಿದ ಮೇಲೆ! ಅಲ್ಲಿಯವರೆಗೆ ತಾಯಿಯೊಬ್ಬಳೇ ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಳು. ದಿನವಿಡೀ ತೋಟ ಗದ್ದೆ ಎಂದು ಕುಣಿದಾಡುತ್ತಿದ್ದ ಆಕೆಗೆ ಇಲ್ಲಿ ಕಟ್ಟಿ ಹಾಕಿದಂತಾಗಿದ್ದು ಮಾತ್ರ ಸುಳ್ಳಲ್ಲ.ಆದರೂ ಬದಲಾದ ಪರಿಸರಕ್ಕೆ ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆ ಅವಳಿಗೂ ತಿಳಿದಿತ್ತು. ಆಫೀಸು ಮುಗಿಸಿ ಬರುವಷ್ಟರಲ್ಲಿ ಮನೆಯ ಕೆಲಸ ಮುಗಿಸಿ ಭಾರ ಹಗುರಗೊಳಿಸುತ್ತಿದ್ದ ಆಕೆ ಬರುಬರುತ್ತಾ ದಣಿಯತೊಡಗಿದಳು.ಅಷ್ಟರಲ್ಲಿ ಅವಳ ಕೈಗೆ ಮೊಮ್ಮಗನೂ ಬಂದಿದ್ದ.ಅವನೊಂದಿಗೆ ಆಟವಾಡುತ್ತಾ ಅವನ ಚಾಕರಿ ಮಾಡುತ್ತಾ ತನ್ನ ನೋವು ದಣಿವುಗಳನ್ನು ಮರೆಯುತ್ತಿದ್ದಳು.ಮನಸ್ಸಿಗೆ ವಯಸ್ಸಾಗದಿದ್ದರೂ ದೇಹ ಮುಪ್ಪಾಗತೊಡಗಿತು.ಕೈ ಕಾಲುಗಳು ದಣಿಯತತೊಡಗಿದವು.ಈಗ ಅವಳ ಕೆಲಸಕ್ಕೊಬ್ಬ ಆಳು ಇಡುವಂತಹ ಪರಿಸ್ಥಿತಿ ಬಂದಿತ್ತು,ಆದರೆ ನನ್ನವಳಿಗೆ ಇದು ಸರಿ ಹಿಡಿಸಲಿಲ್ಲ.'ಯಾಕೆ ಬೇಕು ಈ ಉಸಾಬರಿ? ಅವರನ್ನು ಊರಿಗೇ ಕಳಿಸಿಬಿಡಿ.ಇಲ್ಲಾಂದ್ರೆ ಯಾವುದಾದ್ರೂ ವೃದ್ಧಾಶ್ರಮ ನೋಡಿ ಅಲ್ಲಿ ಸೇರಿಸಿ ಬಿಡಿ.ಇಲ್ಲಿ ಇಡೀ ದಿವಸ ನರಳಾಡುತ್ತಿದ್ದರೆ ನೋಡಿಕೊಳ್ಳುವವರು ಯಾರು? ಇವರ ಈ ನರಳಾಟಕ್ಕೆ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ.ಅವರಿಗೆ ಇಲ್ಲಿನ ವಾತಾವರಣ ಹಿಡಿಸುತ್ತಿಲ್ಲ ಅನಿಸುತ್ತೆ.ಮಗುವನ್ನು ಬೇಬಿ ಸಿಟ್ಟಿಂಗ್ ನಲ್ಲಿ ಬಿಟ್ಟರಾಯ್ತು ಎಲ್ಲ ಸರಿ ಹೋಗುತ್ತೆ' ಎಂದು ತನ್ನೊಳಗಿನ ವಿಷವನ್ನು ಕಕ್ಕಿದಾಗ ಅತ್ತೆಯನ್ನು ಇವಳು ಅರ್ಥ ಮಾಡಿಕೊಂಡಿದ್ದು ಇಷ್ಟೇನಾ? ತನ್ನ ಪಾಲಿನ ಕೆಲಸ ಆಗುವವರೆಗೆ ಬೆಣ್ಣೆಯಂತೆ ಮಾತಾಡುತ್ತಿದ್ದವಳು ಈಗ ಈ ರೀತಿ ಆಡುವುದನ್ನು ಕೇಳಲಾಗದೆ ಕೆನ್ನೆಗೊಂದು ಛಟೀರನೆ ಬಿಟ್ಟು'ನಾಳೆ ನಿನ್ನ ಗತಿಯೂ ಹೀಗಾದರೆ,ನಿನ್ನ ಮಗನೂ ನಿನ್ನನ್ನು ಹೀಗೇ ನೋಡಿಕೊಂಡರೆ..ಒಮ್ಮೆ ಯೊಚಿಸಿ ನೋಡು' ಎಂದಾಗ ಅವಳಲ್ಲಿ ಅಳು ಬಿಟ್ಟು ಬೇರೆ ಉತ್ತರವಿರಲಿಲ್ಲ.
ಇದ್ದಕ್ಕಿದ್ದಂತೆ ಈಗ್ಗೆ ಕಳೆದೆರಡು ದಿನಗಳಿಂದ ಅವಳಲ್ಲಿ ಆದ ಬದಲಾವಣೆ ಕಂಡು ನನಗೇ ಆಶ್ವರ್ಯವಾಗಿತ್ತು.ಇಷ್ಟರವರೆಗೆ ಅತ್ತೆಯೆಂದರೆ ಬಳಿ ಬರದೆ ಉರಿದು ಬೀಳುತ್ತಿದ್ದ ಆಕೆ ಅತ್ತೆಯ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದಳು.ಅವರಿಗೆ ಸ್ನಾನ ಮಾಡಿಸುವುದರಿಂದ ಹಿಡಿದು,ಊಟ ಉಪಚಾರ ಸ್ವಚ್ಛತೆ ಬಗ್ಗೆ ನಿಗಾ ವಹಿಸುತ್ತಿದ್ದಳು. ಬಿಸಿತಾಗದೆ ಬೆಣ್ಣೆ ಕರಗದು..ಇದರಲ್ಲಿ ಏನೋ ರಹಸ್ಯವಿದೆ,ನಾನಂದ ಮಾತುಗಳೇ ಇವಳಲ್ಲಿ ಬದಲಾವಣೆಗೆ ಕಾರಣವಾದುವೇ?! ಎಂದು ನನ್ನ ಮನಸ್ಸು ಯೋಚಿಸುತ್ತಿತ್ತು. ಅಂದು ತಮಾಷೆಗಾಗಿಯೇ ಏನು ಅಮ್ಮಾವ್ರಲ್ಲಿ ಈ ತರಹದ ಬದಲಾವಣೆ? ಸೂರ್ಯ ತನ್ನ ದಿಕ್ಕು ಬದಲಾಯಿಸಿಬಿಟ್ಟನೋ ಹೇಗೆ! ಎಂದಾಗ ಆಕೆ ಅಳುಮುಖದಿಂದಲೇ ಒಂದು ಕಾಗದವನ್ನು ಕೈಗಿತ್ತಳು.ತೆರೆದು ನೋಡಿದರೆ ಅದು ಅವಳ ತಾಯಿ ಬರೆದ ಪತ್ರ.ಅದರ ಸಾರಾಂಶ ಹೀಗಿತ್ತು'ಇಲ್ಲಿ ಮಗನ ಜೊತೆ ಸುಖವಾಗಿರುವ ನನ್ನ ಆಸೆ ನುಚ್ಚು ನೂರಾಯ್ತು.ಅವನು ಹೆಂಡತಿಯ ಗುಲಾಮನಾಗಿ ಹೋದ ಮೇಲೆ ನನ್ನನ್ನು ಈ ವೃದ್ಧಾಶ್ರಮಕ್ಕೆ ತಳ್ಳಿಬಿಟ್ಟ. ಅವರಿಗೆ ಬೇಕಿದ್ದುದು ನನ್ನ ದುಡಿತ ಮತ್ತು ನನ್ನ ಆಸ್ತಿ ಮಾತ್ರ.ಇಷ್ಟು ವರ್ಷ ಹೊತ್ತು ಹೆತ್ತು ಬೆಳೆಸಿದ ಮಗನೇ ಕೊನೆಗೆ ತನ್ನ ಪಾಲಿನ ಹೊರೆ ಇಳಿಸಿಕೊಂಡು ಬಿಟ್ಟ.ಯಾರಿದ್ದರೇನು..?ಕೊನೆಗಾಲಕ್ಕೆ ನಮ್ಮಂತಹ ಮುದಿಜೀವಗಳಿಗೆ ಈ ಆಶ್ರಮವೇ ಗತಿ.ನಿನಗೂ ನನ್ನ ವಯಸ್ಸಿನ ಅತ್ತೆ ಇದ್ದಾರೆ. ಅವರನ್ನು ನಿನ್ನ ತಾಯಿಯೆಂದೇ ತಿಳಿದು ನೋಡಿಕೋ.ನನಗೆ ಬಂದಂತಹ ಸ್ಥಿತಿ ಅವರಿಗೆ ಖಂಡಿತ ಬಾರದಿರಲಿ.ನಿನ್ನಿಂದಾಗಿ ಅವರಿಗೆ ಈ ಆಶ್ರಮದ ಸುಖ ಬೇಡ.' ಇಷ್ಟು ಓದಿದಾಗ ಎಲ್ಲ ಅರ್ಥವಾಗತೊಡಗಿತ್ತು.ತನ್ನ ತಾಯಿ ಬರೆದ ಒಂದು ಪತ್ರ ಅವಳ ಮನಸ್ಸನ್ನು ಬದಲಾಯಿಸಿದ್ದು ಕಂಡು ಸಂತೋಷವಾಗಿತ್ತು. ಕಾಗದ ಮಡಚಿ ತಲೆಯೆತ್ತಿ ನೋಡಿದರೆ ಅತ್ತೆಗೆ ಕೈ ತುತ್ತು ನೀಡುತ್ತಿದ್ದುದು ಕೋಣೆಯೊಳಗಿಂದ ಕಾಣುತ್ತಿತ್ತು.....