ಮಂಗಳವಾರ, ಜುಲೈ 5, 2022

ಕವನ

 ಮಳೆ ಮತ್ತು ನಾನು


ಆಫೀಸಿನ ಕಿಟಕಿಯಿಂದ 

ನೋಡಿದರೆ ಹೊರಗೆ

ಋತುವಿನ ಮೊದಲ ಮಳೆಗೆ

ಕಪ್ಪಡರಿದ ಮೋಡದ 

ಮಿಂಚಿನ ನಡುವೆ

ಸಾಗಿ ಬರುತ್ತಿತ್ತು ಹನಿಗಳ ಮೆರವಣಿಗೆ


ಹುಡುಗನೊಬ್ಬ ಓಡಿದ 

ನನ್ನನ್ನು ದಾಟಿ

ಆಟವಾಡಲು ಮಳೆಯಲ್ಲಿ ನೆನೆದು

ತಡೆಯಿತು ನನ್ನ ವಯಸ್ಸು ಹಿರಿತನ 

ಅವನ ಕೈಯನ್ನು ಹಿಡಿದೆಳೆದು


ಮಳೆ ಹಾಗೂ ನಾನು 

ಇಬ್ಬರ ನಡುವೆ

ಒಂದು ರೀತಿಯ 

ಗೋಡೆ ಅಡ್ಡವಾಗಿದೆ

ನನ್ನ ಬಾಲ್ಯದ ಮಳೆಯೂ 

ಬೆಳೆದು ದೊಡ್ಡದಾಗಿದೆ.


ಒಂದೊಂದು ಮಳೆಹನಿ ಬಂದು

ಗಾಜಿನ ಕಿಟಕಿಗೆ ಪಟಪಟನೆ ಬಡಿಯುತ್ತಿತ್ತು..

ನಾವಿಬ್ಬರೂ ಜೊತೆ ಸೇರಿ ಆಡುತ್ತಿದ್ದೆವು

ಬಹುಶಃ ಅದಕ್ಕಾಗಿ 

ಈಗ ನನ್ನ ಕರೆಯುತ್ತಿತ್ತು

ನಾವು ಸಣ್ಣವರಿದ್ದೆವು 

ಮಾತು ದೊಡ್ಡದಾಗಿರುತ್ತಿತ್ತು

ಈಗಿನಂತೆ ಬೇಗ ಮನೆ ಸೇರುವ 

ತುರ್ತು ಯಾರಿಗಿತ್ತು?

 

ಬಾನಂಚಲಿ ಹೊಳೆವ ಮಿಂಚು 

ಕಾಣಲು ಕಣ್ಣು ತವಕಿಸುತಿತ್ತು

ಈಗ ಯಾಕೋ ಭಯ ತರಿಸುತ್ತಿತ್ತು

ಮಳೆಯೆಂದರೆ ಒಂಥರಾ ಹಾಯೆನಿಸುತಿತ್ತು

ಈಗ ಒಮ್ಮೆ ನಿಂತರೆ ಸಾಕೆನಿಸುತ್ತಿತ್ತು


ತುಂಬಿದೆ ಅದರಲ್ಲಿ ಸುತ್ತಲಿನ ಕೊಚ್ಚೆ ಕೆಸರು..

ಮುಟ್ಟಿದರೆ ಕೆಟ್ಟ ಹೆಸರು..

ದೂರ ಸರಿದು ನಿಲ್ಲುವ ಹಾಗಿದೆ..

ನನ್ನ ಬಾಲ್ಯದ ಮಳೆಯೂ 

ಬೆಳೆದು ದೊಡ್ಡದಾಗಿದೆ


ಕುಣಿದು ಕುಪ್ಪಳಿಸುತಿದ್ದ ನೀರಲ್ಲಿ

ಈಗ ಕ್ರಿಮಿ ಕೀಟಗಳೇ ಕಾಣುತ್ತಿವೆ

ನನ್ನ ಬಗ್ಗೆಯಾದರೂ ಚಿಂತೆಯಿಲ್ಲ, 

ಲ್ಯಾಪ್‌ಟಾಪ್ ಒದ್ದೆಯಾಗುವ 

ಭಯ ಕಾಡುತ್ತಿದೆ.


ಮಳೆಯೆಂದರೆ ಬಿಸಿ ಬಿಸಿ ಚಹಾ 

ತಿಂಡಿಯ ಘಮದೊಂದಿಗೆ 

ಉಲ್ಲಾಸ ಉತ್ಸಾಹವಿರುತ್ತಿತ್ತು

ಒಂದಷ್ಟು ನೆನಪುಗಳ ಕೊಟ್ಟು

ಮರಳಿ ಸಾಗುತ್ತಿತ್ತು..


ಬೆಳೆಯುತ್ತ  ಹೋದಂತೆ ಆ ಕ್ಷಣಗಳು 

ನಮ್ಮ ನಡುವೆ ಎಲ್ಲೋ 

ಕಳೆದು ಹೋಗಿದೆ

ನನ್ನ ಬಾಲ್ಯದ ಮಳೆಯೂ 

ಬೆಳೆದು ದೊಡ್ಡದಾಗಿದೆ..!!


ಮಂಗಳವಾರ, ಮೇ 26, 2020

ಲಾಕ್ ಡೌನ್ ಕವಿತೆಗಳು-2

ಸತ್ತು ಮಲಗಿದೆ
ನಿರ್ಜೀವ ರಸ್ತೆ
ಅಲ್ಲಿ ಗಿಜಿಗುಡುವ ಸದ್ದಿಲ್ಲ!
ನೆನಪಿಸಿದಂತಿದೆ..
ಹೊರಬರಬೇಡಿ ಯಾರೂ
ರೋಗಕ್ಕೆ ಮದ್ದಿಲ್ಲ!!
****
ಲೋಕದ ಭಾರ 
ತಮ್ಮದೇ ತಲೆಯ 
ಮೇಲೆ ಹೊತ್ತಂತೆ
ನಮ್ಮಿಂದಲೇ ದಿನ ಬೆಳಗು
ಎಂಬಂತೆ 
ತಿರುಗುತ್ತಿದ್ದವರಿಗೆ ಈಗ  
ತಿಂದುಂಡು ಹೊರಳಾಡಿ
ದಿನ ಕಳೆಯುವುದು 
ಹೇಗೆಂಬ  ಚಿಂತೆ !!
****
ಕಂಡಾಗ ಅನಿಸಿದ್ದು ..
ಯಾವಾಗಲೂ
ಮಾನವೀಯತೆಯೇ
ಮಿಗಿಲು
ನಮ್ಮ ಹೊಟ್ಟೆ 
ಕೂಡಾ ತುಂಬುವುದು
ಇನ್ನೊಬ್ಬರ ಹಸಿವು ನೀಗಲು
****
ಎಲ್ಲ ಕಾಲಕ್ಕೆ
ಅನಿವಾರ್ಯವಲ್ಲ
ಕೂಡಿಟ್ಟ ಗಳಿಕೆ ಸಂಪತ್ತು
ನಿಜವಾದ 
ನೆಮ್ಮದಿಯ ಗುಟ್ಟು 
ಒಂದಿಷ್ಟು ಪುರುಸೊತ್ತು 
ಮತ್ತು
ನಮ್ಮವರೊಡನೆ ಕಳೆದ ಹೊತ್ತು
****
ದೂರ ತೀರ ಸೆಳೆತಕೆ
ಮಾರು ಹೋಗಿ
ನಮ್ಮತನವ ಮಾರಿ,
ಮರಳಿ ಬರುವಾಗ
ಬಿಟ್ಟಿ ಬಂದಿದ್ದು ಈ ಮಾರಿ..!!
****
ಮೊದಲು ಎಲ್ಲೆಡೆ
ಮಲಿನವಾಗಿತ್ತು
ಮೂಗು ಮುಚ್ಚಿಕೊಳ್ಳಬೇಕಿತ್ತು
ಆದರೆ 
ಈಗ ಸುತ್ತ ಸ್ವಚ್ಛವಾಗಿದೆ
ಮನುಷ್ಯ
ಮುಖ ತೋರಿಸದಂತಾಗಿದೆ!!
****

ಸೋಮವಾರ, ಮೇ 25, 2020

ಲಾಕ್ ಡೌನ್ ಕವಿತೆಗಳು


ಇಷ್ಟು ದಿನ ಕಂಡು ಕೇಳದ 
ಮುಗ್ಧ ಜೀವಿಗಳ ಆಕ್ರಂದನ
ಇಂದು ತಟ್ಟಿದೆ,
ಹಾಕಿಕೊಂಡಿದ್ದಾನೆ  ಮನುಜ 
ತಾನೇ ಸುತ್ತಲೂ ದಿಗ್ಬಂಧನ
****
ಈ ಭೂಮಿಗೊಬ್ಬನೇ ಒಡೆಯ 
ಅಂದುಕೊಂಡಿದ್ದು ಸುಳ್ಳು  
ಸದ್ಯ ಕಂಡಾಗ ಅನಿಸಿದ್ದು
ಬದುಕುವ ಹಕ್ಕಿದೆ 
ಎಲ್ಲ ಜೀವರಾಶಿಗೆ ಇಲ್ಲೂ
***
ಹೊರಗೆ ಹೊರಟಾಗ ಕಂಡಿದ್ದು 
ದೌಲತ್ತು ಸಂಪತ್ತು 
ಕುರುಡು ಕಾಂಚಾಣ ಒಂದೇ
ಬರುವಾಗ ಸಾವನ್ನೂ ಕಟ್ಟಿ
ಕೊಂಡಿದ್ದು ಬೆನ್ನ ಹಿಂದೆ
***
ಎಷ್ಟೊಂದು ಹಿಂಸೆ ಯಾತನೆ
ಏಕಾಂತ ಒಂಟಿತನದ ಬದುಕು
ಹೆಜ್ಜೆಯಿಟ್ಟರೆ ಸಾಕು 
ಹಿಂಬಾಲಿಸುತ್ತಿದೆ ಸಾವು
ಕಾಲಿನ ಬುಡಕೂ..
***
ನಮ್ಮವರೇ ಇಂದು 
ಕಂಡಾಗ ಸರಿವರು 
ಮಾರು ದೂರ 
ಎಲ್ಲರಿಗೂ ಬೇಕು ಅಂತರ
ಹೇಗಿದೆ ನೋಡಿ...!?
ಸೃಷ್ಟಿಯ ಮುಂದೆ
ಎಲ್ಲರೊಂದೆ 
ಅಸ್ಪ್ರಶ್ಯರು ಒಂಥರಾ...!!


ಶುಕ್ರವಾರ, ಜುಲೈ 18, 2014

ಮತ್ತೆ ಮೂರು ಹನಿಗಳು......

ನಮ್ಮ ಮನೆಯ
ವಾತಾವರಣವೇ ಹೀಗೆ..
ಬದಲಾಗುವುದು ಆಗಾಗ
ಖುಷಿಯಲಿದ್ದರೆ ನನ್ನಾಕೆ
ಮನೆ ತುಂಬಾ ಮಧುರ ರಸರಾಗ
ಮುನಿಸಿಕೊಂಡರೆ
ಮಾತಿಲ್ಲ ಕಥೆಯಿಲ್ಲ ಬಾಯಿಗೆ ಬೀಗ
ಅತ್ತರೆ ಕಣ್ಣೀರೇ ಸಾಕು
ಅಲ್ಲಿ ಧುಮ್ಮಿಕ್ಕುವ ಜೋಗ...:)

     ***********

ಇತ್ತೀಚೆಗೆ ರಾಜ್ಯದಲ್ಲಿ
ಮಹಿಳೆಯರ ಮೇಲೆ
ದೌರ್ಜನ್ಯ ಅತ್ಯಾಚಾರಗಳದೇ
ಸುದ್ದಿ ಅಲ್ಲಲ್ಲಿ..
ಇಂತಹವರನ್ನು ಸಾಯಿಸಬೇಕು
ಕಂಡ ಕಂಡಲ್ಲಿ ಹೊಡೆದು
ಕಲ್ಲಲ್ಲಿ...!

    ***********

ಕಣ್ಣೀರು ಸುರಿಸುತ್ತಿರುವೆನೆಂದು
ಭಾವಿಸದಿರು
ನಿನ್ನನ್ನೇ ನೆನೆದು
ಕೊಡೆ ಮರೆತು ಹೋದ ತಪ್ಪಿಗೆ
ಏನು ಹೇಳಲಿ......
ಮೂಗು ಕಟ್ಟಿದೆ ಗೆಳತಿ
ಮೊನ್ನೆ
ಮಳೆಯಲ್ಲಿ ನೆನೆದು..:)


   ************

ಶನಿವಾರ, ನವೆಂಬರ್ 24, 2012

ಕೊಲೆಗಾರ !!


(ಅನುವಾದಿತ ಕಥೆ)  
ಇಂಗ್ಲೀಷ್ ಮೂಲ:ರವಿ ಲೋಬೊ
                                          ಕೊಲೆಗಾರ !!
ವೇಗವಾಗಿ ಚಲಿಸುತ್ತಿದ್ದ ಆ ಕಾರಿಗೆ ಮಹಿಳೆಯೊಬ್ಬಳು ಕೈ ಚಾಚುತ್ತಿದ್ದುದನ್ನು ಕಂಡ ಆತ ಕಾರನ್ನು ನಿಧಾನಗೊಳಿಸಿದ.ಆಕೆ ಬಹುತೇಕ ರಸ್ತೆ ಮಧ್ಯೆ ಬಂದು ನಿಂತಿದ್ದಳು.ಚಿಕ್ಕ ಕಪ್ಪು ಸ್ಕರ್ಟ್ ಬಿಳಿ ಟಾಪ್ ಧರಿಸಿದ್ದ ಅವಳು, ಅದು ಕತ್ತಲಾದುದರಿಂದ ಕಾರಿನ ಹೆಡ್ ಲೈಟಿನ ಬೆಳಕಿನಿಂದ ತಪ್ಪಿಸಲೆಂದೇನೋ ಸನ್ ಗ್ಲಾಸ್ ಧರಿಸಿದ್ದಳು.
ಕಾರು ನಿಂತಿತು.
ಆಕೆ ಬಾಗಿಲ ಬಳಿ ಬಂದು"ನನಗೆ ಈ ಸಿಟಿಯಲ್ಲಿ ಒಂದು ಸುತ್ತು ಡ್ರಾಪ್ ಕೊಡ್ತೀರಾ.. ಪ್ಲೀಸ್"?ನಯವಾಗಿ ಕೇಳಿದಳು. ಆತ ಮುಂದಿನ ಬಾಗಿಲು ತೆರೆದ.
"ನಾನು ಕಡೇ ಬಸ್ ಮಿಸ್ ಮಾಡ್ಕೊಂಡೆ .ಥ್ಯಾಂಕ್ ಗಾಡ್ ! ಪುಣ್ಯಕ್ಕೆ ನೀನು ಈ ದಾರಿಯಲ್ಲಿ ಬಂದೆ, ನಾನು ಬಹಳ ಹೊತ್ತಿನಿಂದ ಕಾಯುತ್ತಿದ್ದೆ."ಆಕೆ ಸನ್ ಗ್ಲಾಸ್ ತೆಗೆದು ಕವರಿನಲ್ಲಿ ಜೋಪಾನವಾಗಿಡುತ್ತಾ ಹೇಳಿದಳು .
"ಹೌದು ಈ ಕಾಡಿನ ಪ್ರದೇಶದಲ್ಲಿ ತುಸು ಬೇಗನೇ ಕತ್ತಲಾಗಿಬಿಡುತ್ತೆ"ಆತ ಅಂದ.
"ತುಂಬಾ ಚಳಿಯಿದೆ ಹೊರಗಡೆ," ಆಕೆ ಅಂಗೈ ಉಜ್ಜುತ್ತಾ ಹೇಳಿದಳು.
ಕಾರು ಈಗ ವೇಗ ಪಡೆಯುತ್ತಿತ್ತು.
"ಅಪರಿಚಿತರ ಜೊತೆ ಈ ತರಹ ತಡ ರಾತ್ರಿ ಡ್ರಾಪ್ ಕೇಳಲು ಭಯವಾಗುವುದಿಲ್ಲವೇ.ಅಪರಾತ್ರಿಯಲ್ಲಿ ಕೆಲವು ನಿಗೂಢ ಘಟನೆಗಳು ಈ ದಾರಿಯಲ್ಲಿ ನಡೆಯುತ್ತಿರುತ್ತವೆ ಅದಕ್ಕಂದೆ."ಆತ ಪ್ರಶ್ನಿಸಿದ
"ನಿಜವಾಗಿಯೂ! ನಾನೂ ಭಯಗೊಂಡಿದ್ದೆ, ಈ ಕಾಡಿನಲ್ಲಿ ಹೀಗೆ ಇಡೀ ರಾತ್ರಿ ಕಳೆಯುವುದನ್ನು ನನ್ನಿಂದ ಊಹಿಸಲೂ ಕೂಡಾ ಸಾಧ್ಯವಾಗುತ್ತಿಲ್ಲ.ನಿನ್ನ ಕಾರಿನ ಬೆಳಕು ಕಂಡಾಗಲೇ ,ಈ ಅವಕಾಶ ಮಿಸ್ ಮಾಡ್ಕೋ ಬಾರದು ಅಂತ ನಿರ್ಧರಿಸಿದೆ..,ನಾನು ಬಸ್ ಮಿಸ್ ಮಾಡ್ಕೊಂಡಿದ್ದು, ನೀನು ಈ ದಾರಿಯಲ್ಲಿ ಬಂದಿದ್ದು…ಏನೋ ಅಂತಾರಲ್ಲ ಕಟುಕನ ಕೈಗೆ….ಇದೊಂಥರಾ ಕಾಕತಾಳೀಯ.."
ಕಾರಿನ ಡಾಶ್ ಬೋರ್ಡಿನ ಮೀಟರ್ ಲೈಟ್, ಹಾಗೂ ಹೆಡ್ ಲೈಟಿನ ಹೊರತು ಎಲ್ಲೆಡೆ ಕತ್ತಲಾವರಿಸಿತ್ತು. ಉದ್ದುದ್ದ ಮರಗಳು ರಸ್ತೆಯ ಒಂದು ಬದಿಗೆ ಒರಗಿ ನಿಂತಿದ್ದರೆ ಇನ್ನೊಂದೆಡೆ ಪ್ರಪಾತದಂತಿತ್ತು. ನೋಡು ನೋಡುತ್ತಿದ್ದಂತೆ ಕಾರು ನಗರದತ್ತ ಬಂದಿತ್ತು.ದೊಡ್ಡ ದೊಡ್ಡ ಬೀದಿದೀಪಗಳು ಆ ಕತ್ತಲೊಂದಿಗೆ ಇನ್ನೂ ಹೋರಾಡುತ್ತಿದ್ದವು.
"ನಾನಿಲ್ಲೇ ಇಳಿದು ಬಿಡುತ್ತೇನೆ" ಅಂದಳು ಆಕೆ.
ಕಾರು ರಸ್ತೆ ಬದಿಯಲ್ಲಿ ಬಂದು ನಿಂತಿತು.
ಆಕೆ ಆತನಿಗೊಂದು ಥ್ಯಾಂಕ್ಸ್ ಹೇಳಿ ಡೋರ್ ತೆರೆಯಲು ಪ್ರಯತ್ನಿಸಿದಳು."ಯಾವಾಗಲೂ ಹೀಗೆ.. ನನಗೆ ಬಾಗಿಲು ತೆರೆಯಲಾಗುವುದೇ ಇಲ್ಲ.ಅವು ನನ್ನ ತಬ್ಬಿಬ್ಬು ಮಾಡಿಬಿಡುತ್ತವೆ".ಅನ್ನುತ್ತಾ ಮತ್ತೆ ಯತ್ನಿಸಿದಳು.
"ಅದು ಲಾಕ್ ಆಗಿಬಿಟ್ಟಿದೆ" ಎಂದ ಆತ
"ನನಗೋಸ್ಕರ ಸ್ವಲ್ಪ ತೆರೀತೀರಾ…"
ಆತ ಪ್ರತಿಕ್ರಿಯಿಸಲಿಲ್ಲ,
ಸ್ವಲ್ಪ ಹೊತ್ತಿನ ಬಳಿಕ ಉತ್ತರಿಸಿದ, "ಕೆಲವೊಮ್ಮೆ ಅಚ್ಚರಿಗಳು ನಡೆದು ಬಿಡುತ್ತವೆ. ನೀನು ಬಸ್ ಮಿಸ್ ಮಾಡ್ಕೊಂಡಿದ್ದು ನಾನು ಈ ದಾರಿಯಲ್ಲಿ ಬಂದಿದ್ದು…ಏನೋ ಅಂತಾರಲ್ಲ...ನೀನೇ ಈಗ ಅಂದಂತೆ ಕಟುಕನ ಕೈಗೆ…....ಹೌದು ನಾನೊಬ್ಬ ಕೊಲೆಗಡುಕ"
ಆಕೆ ವಿಷಣ್ಣ ನಗೆ ನಕ್ಕಳು.
"ನಾನೇನು ಟಿ ವಿ ಯೊಳಗಿದ್ದೇನೆಯೇ,..ಅಥವಾ ಕ್ಯಾಮರ ಮುಂದೆ ನಿಂತಿದ್ದೇನಾ..ಇಂತಹ ಡೈಲಾಗ್ ಕೇಳಲು",
ಆತ ಕಪಾಳಕ್ಕೊಂದು ಬಾರಿಸಿದ.ಆ ರಭಸಕ್ಕೆ ಆಕೆಯ ತಲೆ ಬಾಗಿಲಿಗೆ ಬಡಿದಿತ್ತು.ಕಣ್ಣುಗಳು ನೋವಿನಿಂದ ನೀರು ತುಂಬಿಕೊಂಡು ಕೆಂಪಗಾಗಿದ್ದುವು.
"ನನ್ನ ಮಾತನ್ನು ಗಮನವಿಟ್ಟು ಕೇಳು, ಜಾಸ್ತಿ ಮಾತಡಬೇಡ. ಸುಮ್ನೆ ಇದ್ರೆ ಒಳ್ಳೆಯದು..ಯಾವುದೇ ಹುಚ್ಚು ಪ್ರಯತ್ನ ಪಟ್ಟರೆ, ಏನಾದ್ರೂ ಚಾಲಾಕಿ ತೋರಿಸಿದ್ರೆ ನಿನ್ನನ್ನು ಉಳಿಸಲ್ಲ ಅಷ್ಟೇ.. "
ಈಗ ಕಾರು ಯೂ ಟರ್ನ್ ಪಡೆದು,ಕಾಡಿನ ಒಂದು ಒಂಟಿ ರಸ್ತೆ ನಡುವೆ ವೇಗವಾಗಿ ಸಾಗುತ್ತಿತ್ತು. ಆಕೆ ಈಗ ಸಾವರಿಸಿಕೊಂಡು ಕರ್ಚೀಫಿನಿಂದ ಮೂಗೊರೆಸಿಕೊಂಡಳು.
"ಪ್ಲೀಸ್ ..ನನ್ನ ಕೊಲ್ಬೇಡ .."
ಆತ ಏನೂ ಪ್ರತಿಕ್ರಿಯಿಸಲಿಲ್ಲ….
ಆತ ಸುಂದರ ಸುಧೃಢ ಯುವಕನಾಗಿದ್ದ,.ಆತ ಕೈಗೆ ಕಪ್ಪು ಗ್ಲೌಸ್ ಹಾಕಿದ್ದನ್ನು ಆಕೆ ಗಮನಿಸಿದಳು.ಇಂತಹ ಸಂದರ್ಭದಲ್ಲಿ ಸುಮ್ಮನಿದ್ದರೆ ಪ್ರಯೋಜನವಿಲ್ಲ ಎಂದುಕೊಂಡಳು.ಕೂಗಿ ಅರಚೋಣವೆಂದರೆ ಯಾರೊಬ್ಬರೂ ಕಾಣುತ್ತಿರಲಿಲ್ಲ.. ಆಕೆಗೆ ಏನೋ ಹೊಳೆದಂತಾಗಿ...
"ನಿನಗೆಷ್ಟು ಹಣ ಬೇಕು…ಹೇಳು "
ಮೌನ ಮುಂದುವರಿದಿತ್ತು..
"ನನ್ನನ್ನು ಬಿಟ್ಟು ಬಿಡು, ಯಾರ ಬಳಿಯೂ ಹೇಳಲ್ಲ, ನಾನು ನೀನು ಭೇಟಿಯಾಗದವರ ರೀತಿ ಇದ್ದು ಬಿಡುತ್ತೇನೆ.ನಾನು ಯಾವುದಕ್ಕೂ ಸಿಧ್ಧ..ಅಸಹಾಯಕತೆಯ ನಡುವೆ ಹೇಳಿದಳು.
ಆತನ ತೊಡೆಯ ಮೇಲೆ ಕೈಯಿಡುತ್ತಾ, ಮೆಲ್ಲಗೆ ತಟ್ಟುತ್ತಾ "ನಿನಗಿದು ಇಷ್ಟಾನಾ…"?? ಕೇಳಿದಳು
"ತೆಗೀ ಕೈನಾ.,ಇಲ್ಲಾಂದ್ರೆ ಇನ್ನೊಂದು ಬಾರಿಸ್ತೀನಿ.."
ತಕ್ಷಣ ಕೈ ಹಿಂತೆಗೆದು ಕೊಂಡಳು
ಕಾರು ಬೆಟ್ಟದ ರಸ್ತೆಯ ನಡುವೆ ಹಾವಿನಂತೆ ಚಲಿಸುತ್ತಿತ್ತು.
"ಈ ಪ್ರಪಂಚದಲ್ಲಿ ಸುಖಕ್ಕಾಗಿ ಸೆಕ್ಸ್ ಗಿಂತಲೂ ಬೇಕಾದಷ್ಟು ವಿಷಯಗಳಿವೆ.ಯೋಚನೆ ಮಾಡು....ಈ ಮನುಷ್ಯರು ಯಾಕೆ ಕೊಲೆ ಮಾಡುತ್ತಾರೆ"??
ಆಕೆ ಪ್ರತಿಕ್ರಿಯಿಸಲಿಲ್ಲ.ಆದರೆ ಪ್ರಶ್ನೆ ಮರುಕಳಿಸಿದಾಗ ಆಕೆಗೆ ಏನೂ ತೋಚಲಿಲ್ಲ.ಆತ ಇನ್ನೊಮ್ಮೆ ಕಪಾಳಕ್ಕೆ ಬಾರಿಸಿದ್ದ.
"ನೀನು ಯೋಚಿಸಿಲ್ಲ ಉತ್ತರಿಸಿಲ್ಲವೆಂದರೆ ನಿನಗೆ ನನ್ನ ಬಗ್ಗೆ ಆಸಕ್ತಿಯಿಲ್ಲವೆಂದಾಯ್ತು, ಮತ್ತು ನಾನು ನಿನ್ನಲ್ಲಿ ಆಸಕ್ತಿ ಕಳೆದುಕೊಂಡ್ರೆ, ನನ್ನಲ್ಲಿ ನಿನಗೆ ಯಾವುದೇ ಬೆಲೆಯಿಲ್ಲ.ನಾನೀಗ ನಿನ್ನ ಕೊಂದು ಆ ಪ್ರಪಾತಕ್ಕೆಸೆಯಬಹುದು.
ಆಕೆ ಭಯಗೊಂಡಳು, "ಪ್ಲೀಸ್…"ಬೇಡತೊಡಗಿದಳು
"ಹಾಗಾದ್ರೆ ಹೇಳು…ಯಾಕೆ ಕೊಲೆ ಮಾಡ್ತಾರೆ"??
ಆಕೆ ಸ್ವಲ್ಪ ಸಮಯದ ಬಳಿಕ, "ಪ್ರತೀಕಾರಕ್ಕಾಗಿ" ಅಂದಳು
"ಆಮೇಲೆ.."?
"ಮತ್ಸರ, ಜಗಳ, ಕೋಮು ಗಲಭೆ,ಹಣ, ಹೆಣ್ಣು, ಆಸ್ತಿ….".
ನೀನೇನು ಟೀಚರಾ..???
"ಹೌದು "…
"ನೀವು ಹೀಗೇನೆ…ನಿಮ್ಮ ಬಳಿ ಎಲ್ಲದಕ್ಕೂ ಉತ್ತರವಿರುತ್ತೆ. ಆದ್ರೆ ಇದು ಬಹುಶಃ ತಪ್ಪಾಗಿರಬಹುದು, ಯಾರಾದ್ರೂ ಪ್ರಶ್ನೆ ಕೇಳಿದ್ರೂ ಸಾಕು ನೀವು ಪುಸ್ತಕದ ರೆಡಿಮೇಡ್ ಉತ್ತರದೊಂದಿಗೆ ರೆಡಿಯಾಗಿರ್ತೀರಾ.".
ಅಷ್ಟರಲ್ಲಿ ಯಾವುದೋ ಸಣ್ಣ ಪ್ರಾಣಿ, ತೋಳ ವೆನಿಸುತ್ತೆ ರಸ್ತೆ ಮಧ್ಯೆ ಬರಲು ಪ್ರಯತ್ನಿಸಿ, ಕಾರಿನ ಹೆಡ್ ಲೈಟಿನ ಬೆಳಕಿಗೆ ದಿಕ್ಕು ತೋಚದಂತಾಗಿ ಕೊನೆ ಕ್ಷಣದಲ್ಲಿ ತಪ್ಪಿಸಿಕೊಂಡು ಹೋಯ್ತು..
"ನೀನು ಯೋಚನೆ ಮಾಡುತ್ತಿಲ್ಲ, ಹೋಗ್ಲಿ ಬಿಡು ಮನುಷ್ಯನ ಯಾವ ನಡವಳಿಕೆ ಮತ್ತೆ ಮತ್ತೆ ಕೊಲೆ ಮಾಡಿಸುತ್ತೆ??? ಆತ ಕೇಳಿದ
"ಹಣ "ಉತ್ತರಿಸಿದಳು ಆಕೆ
"ಅದಕ್ಕೆ ಹಲವಾರು ಸುಲಭ ದಾರಿಗಳಿವೆ. ಕೊಲೆ ಮಾಡುವ ಅಗತ್ಯವಿಲ್ಲ "
"ಬೇರೆ ಕಾರಣ ಗೊತ್ತಿಲ್ಲ…"ನರ್ವಸ್ ಆಗಿ ಹೇಳಿದಳು
"ಸಂತೋಷಕ್ಕಾಗಿ…..ನೀನು ಏನಂತೀ"…???
"ಏನಂದೆ.."..? ಆಕೆ ಪ್ರಶ್ನಿಸಿದಳು
"ಸಂತೋಷಕ್ಕಾಗಿ ಕೊಲೆ ಮಾಡಬಹುದಾ…"? ಮರು ಪ್ರಶ್ನಿಸಿದ
"ಇಲ್ಲ .. "
"ಪರಸ್ಪರರ ನಡುವಿನ ವ್ಯತ್ಯಾಸಕ್ಕಾಗಿ .."??
"ವ್ಯತ್ಯಾಸಕ್ಕಾಗಿ …"????
"ಹೌದು , ಭಾವನೆಗಳೇ ಇಲ್ಲದ ಮನುಷ್ಯ ಮಾತ್ರ ಕೊಲೆ ಮಾಡುತ್ತಾನೆ. ಆತನಿಗೆ ಅದೊಂದು ದಿನ ನಿತ್ಯದ ಚಟುವಟಿಕೆ.ಟೀ ಕುಡಿದಂತೆ ಅಥವಾ ಬ್ಯಾಂಕಿನಿಂದ ಚೆಕ್ ಬುಕ್ ಆರ್ಡರ್ ಮಾಡಿದಂತೆ.."
ಅದು ಹೇಗೆ ಸಾಧ್ಯ…??
ನೀನು ಸಸ್ಯಾಹಾರಿ ನಾ..? ಕೇಳಿದ ಆತ
ಏನು….?
ನೀನು ಚಿಕನ್ ತಿನ್ನುತ್ತೀಯಾ?ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವಾಗ ಒಮ್ಮೆಯಾದ್ರೂ ಯೋಚಿಸಿದ್ದೀಯಾ. ನೀನು ಮಾಡೋದು ಸರೀನಾ ಅಂತ..?.?
ಕಾರಣ ಸಿಗದೆ ಆಕೆ ಮಾತನಾಡದಾದಳು.
"ಇನ್ನು ಕೆಲವರು ವಿಚಿತ್ರ ಕಾರಣಗಳಿಗಾಗಿ ಕೊಲೆ ಮಾಡ್ತಾರೆ. ನೀನು ಡೆವಿಲ್ ಫೋಟೋಗ್ರಾಫರ್ ಬಗ್ಗೆ ಕೇಳಿದ್ದೀಯಾ.."?
"ಇಲ್ಲ.."
"ದಶಕಗಳ ಹಿಂದೆ ಆತ ವರ್ಷಕ್ಕೆ 18 ಕೊಲೆ ಮಾಡಿದ್ದ.ಅದರಲ್ಲಿ ಬಹುತೇಕ ಎಲ್ಲರೂ ಗಂಡಸರೇ ಆಗಿದ್ದರು. ಅದು ಅನಗತ್ಯ ಬಿಡು…ಅದರ ಹೊರತಾಗಿ ಕೊಲೆಗಾರ ಅಪರಾಧ ಕೃತ್ಯಗಳ ಕೆಲವು ಚಿತ್ರಗಳನ್ನು ಅಲ್ಲಿ ಬಿಟ್ಟು ಹೋಗುತ್ತಿದ್ದ. ಕೊಲೆಯಾದ ನತದೃಷ್ಟರೂ ಅಮಾಯಕರೇನಲ್ಲ, ಹಲವಾರು ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರು.ಆತ ಕೆಲವು ದಿನಗಳವರೆಗೆ ಅವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದ. ಅವರ ಕೃತ್ಯಗಳ ಬಗ್ಗೆ ಚಿತ್ರ ಸಂಗ್ರಹಿಸುತ್ತಿದ್ದ, ಸಾಕ್ಷ್ಯಗಳೆಲ್ಲ ಸಿಕ್ಕ ಮೇಲೆಯೇ ಆತ ಕೊಲೆಮಾಡುತ್ತಿದ್ದ.ನಂತರ ಅಲ್ಲಿ ಆ ಚಿತ್ರಗಳನ್ನು ಬಿಟ್ಟು ಹೋಗುತ್ತಿದ್ದ. ಯಾರೊಬ್ಬರಿಗೂ ಅವನ ಹೆಸರು ಗೊತ್ತಿಲ್ಲ. ಆತ 'ಡೆವಿಲ್ ಫೋಟೊಗ್ರಾಫರ್' ಎಂದೇ ಪರಿಚಿತ.ಆತನನ್ನು ಎಲ್ಲರೂ'ಡೆವಿಲ್' ಎಂದೇ ಕರೆಯುತ್ತಿದ್ದರು.
"ಒಂದು ರೀತಿ ನೋಡಿದರೆ ಆತ ಶಿಕ್ಷೆ ನೀಡುವವನಂತೆ ಕಾಣುತ್ತಾನೆ".ಆಕೆ ಅಂದಳು.
"ಹೌದು ಆರಂಭಕ್ಕೆ ನಾನೂ ಅದೇ ರೀತಿ ಅಂದುಕೊಂಡಿದ್ದೆ. ಆದರೆ ಆತ ಯಾಕೆ ನಿಲ್ಲಿಸಿದ, ದಶಕಗಳಿಂದ ಯಾಕೆ ಮೌನವಾಗಿದ್ದಾನೆ ಎಂದೇ ತಿಳಿಯುತ್ತಿಲ್ಲ"
"ಏನು ಆಯಿತು ಅವನಿಗೆ."ಪ್ರಶ್ನಿಸಿದಳು
"ಆತ ತಣ್ಣಗಾದ, ನಾನು ಅವನ ಕೊಲೆಗಳ ಬಗ್ಗೆ ತಿಳಿಕೊಂಡಿದ್ದೇನೆ.ಆತ ಒಬ್ಬ ಕಲೆಗಾರ ಕೂಡಾ,ಆತ ಕೊಲೆ ಮಾಡುವ ಮುನ್ನ ಅವರ ಮನವೊಲಿಸುತ್ತಿದ್ದ.ಕೊಲೆಯಾಗುವ ಸಂದರ್ಭದಲ್ಲಿ ಯಾವುದೇ ಪ್ರಯತ್ನ ಪಟ್ಟ ಬಲತ್ಕಾರ ಪಟ್ಟ ಕುರುಹುಗಳಿರುವುದಿಲ್ಲ.ನತದೃಷ್ಟರು ಸುಲಭವಾಗಿ ಸಾವನ್ನು ಒಪ್ಪಿಕೊಳ್ಳುತ್ತಿದ್ದರು.ಆತ ಒಬ್ಬ ಪರ್ಫೆಕ್ಷನಿಸ್ಟ್. ಪೋಲೀಸರಿಗೂ ಹಿಡಿಯಲು ಸಾಧ್ಯವಿಲ್ಲ.ಆದರೆ ದೇವರೇ ಬಲ್ಲ,ಎಷ್ಟು ಕಾಲ ಹೀಗೆ ಇರಬಲ್ಲ..ಆದರೆ ಈ ಸಯನೈಡ್ ಕೊಲೆಗಳ ರೀತಿಯೇ ಬೇರೆ......"
"ಹೌದು ನಾನೂ ಕೂಡಾ ಈ ಬಗ್ಗೆ ಓದಿದ್ದೆ.ಸಯನೈಡ್ ಕೊಲೆ ಅಂದ್ರೆ ಆ ಕೊಲೆಗಾರ ಅಮಾಯಕ ಹುಡುಗಿಯರಿಗೆ ವರದಕ್ಷಿಣೆಯಿಲ್ಲದೆ ಮದುವೆಗೆ ಒಪ್ಪಿಸಿ, ಮನವೊಲಿಸಿ ದಂಪತಿಗಳಂತೆ ಲಾಡ್ಜ್ ಒಂದರಲ್ಲ್ಲಿ ರೂಂ ಮಾಡಿ ರಾತ್ರಿ ಕಳೆದು, ಮರುದಿನ ಆಕೆ ಗರ್ಭವತಿಯಾಗದಂತೆ ಮಾತ್ರೆ ತೆಗೆದುಕೊಳ್ಳಲು ಹೇಳುತ್ತಿದ್ದ.ಆ ಮಾತ್ರೆಯಲ್ಲಿ ಸಯನೈಡ್ ಇರುತ್ತಿತ್ತು"
"ಒಳ್ಳೆಯದು..ನಿನಗ್ಗೊತ್ತಾ ಆತ ಎಷ್ಟು ಕೊಲೆ ಮಾಡಿದ್ದಾನೆ.".?
"ಹತ್ತು ಅಥವಾ ಹದಿನೈದು ಇರಬಹುದು."
"ಪೋಲೀಸರು ಆರೆಸ್ಟ್ ಮಾಡಿದಾಗ ಹೇಳಿದ್ದ ೧೭ ಜನ, ಆದರೆ ವಾರದೊಳಗೆ ಅದು ೨೦ ಕ್ಕೇರಿತ್ತು. ಏನಾದ್ರೂ ಆಗಲಿ.., ನನಗೆ ಈ ಸಯನೈಡ್ ಕಿಲ್ಲರ್ ಬಗ್ಗೆ ಆಸಕ್ತಿಯಿಲ್ಲ.ಅವನಿಗೆ ಕೊಲೆ ಮಾಡುವ ರೀತಿಯೇ ಸರಿಯಿಲ್ಲ.ಆತನಿಗೆ ಬೇಕಾಗಿದ್ದು ಕೇವಲ ಹಣ ಮತ್ತು ಸೆಕ್ಸ್.ಆತನದು ಅದೇ ಸೂತ್ರ.ಪೋಲೀಸರು ಹಿಡಿಯುವವರಗೂ ಅಲ್ಲೇ ಸುತ್ತುತ್ತಿದ್ದ, ಈಗ ಇಂಟರೆಸ್ಟಿಂಗ್ ಭಾಗಕ್ಕೆ ಬರೋಣ..."ಆತ ಅಂದ
ಆಕೆ ದಿಟ್ಟಿಸಿ ನೋಡುತ್ತಿದ್ದಳು...
"ಇತ್ತೀಚೆಗೆ ಕಳೆದ ತಿಂಗಳಲ್ಲಿ ಮೂರು ಕೊಲೆಗಳು ನಡೆದವು. ಆ ಮೂರೂ ಕೊಲೆಗಳ ಭಾವಚಿತ್ರಗಳಿವೆ.
"ಡೆವಿಲ್ ಮತ್ತೆ ಬಂದಿರಬೇಕು".ಆಕೆ ಎದೆಬಡಿತ ಜೋರಾಗಿತ್ತು.
"ಹೌದು ದಶಕಗಳ ನಂತರ, ನಿನಗ್ಗೊತ್ತ ಇಲ್ಲಿ ಏನಾಗುತ್ತಿದೆ ಅಂತ.."?
"ಇಲ್ಲ "
"ಸ್ಥಾನಕ್ಕಾಗಿ ಪೈಪೋಟಿ ಅಷ್ಟೇ,ನಾನು ಡೆವಿಲ್ ಬಗ್ಗೆ ಅರ್ಥಮಾಡಿಕೊಂಡೆ,ಹತ್ತು ವರ್ಷಗಳಲ್ಲಿ ಆತ 18 ಕೊಲೆ ಮಾಡಿ ಮೊದಲ ಸ್ಥಾನದಲ್ಲಿದ್ದ.ಆದರೆ ಇದ್ದಕ್ಕಿದ್ದಂತೆ 20ಕ್ಕೇರುವಲ್ಲಿ ಮತ್ತೊಬ್ಬರು ಪೈಪೋಟಿ ನೀಡುವುದನ್ನು ಕಂಡ.ಅದಕ್ಕಾಗಿ 3 ಕೊಲೆ ಮಾಡಿ 21ಕ್ಕೇರಿಸಿಕೊಂಡ.ನೀನು ಯೋಚನೆಯನ್ನು ನಿಲ್ಲಿಸುವುದು ಒಳ್ಳೆಯದು.ಇಲ್ಲಿ ನೋ ಮನಿ, ನೋ ಸೆಕ್ಸ್..ಪ್ರತೀಕಾರವಿಲ್ಲ.ಕೇವಲ ಸ್ಥಾನಕ್ಕಾಗಿ ನಂಬರ್ ವನ್ ಪಟ್ಟಕ್ಕಾಗಿ.."
"ಇದೆಲ್ಲಾ ನನಗ್ಯಾಕೆ ಹೇಳ್ತಿದ್ದೀಯಾ.."??
"ಯಾಕಂದ್ರೆ ನಾನೂ ಈ ರೇಸ್ ನಲ್ಲಿದ್ದೇನೆ.."
"ಅಂದ್ರೆ ಅದರ ಅರ್ಥ."?
"ಕಳೆದ ೫ ವರ್ಷಗಳಲ್ಲಿ ೬೦ ಮಂದಿ ಕಾಣೆಯಾಗಿದ್ದಾರೆ.ಕೇವಲ ೨೦ ಜನ ಸಯನೈಡ್ ಗೆ ಬಲಿಯಾದವರು.ಹಾಗಾದ್ರೆ ಉಳಿದವರು.."?
"ನೀನು.."?
"ಇಲ್ಲ, ಕಳೆದ ತಿಂಗಳವರೆಗೆ ೨೧, ನಾನು ಮತ್ತೆ ಡೆವಿಲ್ ಸಮನಾಗಿದ್ದೆವು,ಈಗ ಏನಾಗುತ್ತೆ ಗೊತ್ತಾ.."?
"ಡೆವಿಲ್ ಮೊದಲನೇ ಸ್ಥಾನಕ್ಕಾಗಿ ಮತ್ತೆ ಕೊಲೆ ಮಾಡಲು ಶುರು ಮಾಡ್ತಾನೆ."
"ಖಂಡಿತವಾಗಿಯೂ" ಆತ ಅಂದ.
" ಇಬ್ಬರಲ್ಲೊಬ್ಬರು ನಿಲ್ಲಿಸುವವರೆಗೆ ಈ ಕೊಲೆ ಸರಣಿ ಮತ್ತೆ ಮುಂದುವರಿಯುತ್ತೆ.ಆ ಡೆವಿಲ್ ನ ಕೊಲ್ಲುವುದು ಬಹಳ ಆಸಕ್ತಿದಾಯಕವಾಗಿರಬಹುದು.ನಾನು ಪ್ರತಿಕ್ಷಣವನ್ನು ಆಸ್ವಾದಿಸುತ್ತ ಕಾದು ನೋಡಬೇಕೆಂದಿದ್ದೇನೆ.ಅವನ ಮುಂದಿನ ನಡೆ ಏನಿರಬಹುದು ? ತುಂಬಾ ಕಾತರನಾಗಿದ್ದೇನೆ."
"ನಿಜವಾಗಿಯೂ.., ಟಾಪ್ ವನ್ ಆಗಲು ಅವನು ಯೋಚಿಸುತ್ತಿದ್ದಾನೆ ,ಬಹುಶಃ ಅವನಿಗೆ ನಿನ್ನ ಬಗ್ಗೆ ಆಸಕ್ತಿಯಿರಬಹುದು."ಅಂದಳು ಆಕೆ
"ಈಗ ನೀನು ಯೋಚಿಸಿ ಮಾತಾಡುತ್ತಿದ್ದೀಯಾ "ಅಂದ ಅವಳ ಭುಜ ತಟ್ಟುತ್ತಾ..
"ಅವನು ಕೈಗೆ ಸಿಗಲ್ಲ ಅಂತ ಹೇಳ್ತಿಯಾ"?
"ಬಹುಶಃ ಅವನು ಪೋಲೀಸ್ ಆಗಿದ್ದರೆ..."ಅಂದಳು
"ಅದು ಅನುಮಾನ."
"ಅಥವಾ ಅವನು ಯಾರಾದರೂ ಸಾಮಾನ್ಯ ಮನುಷ್ಯನಾಗಿರಬಹುದು, ಯಾವುದಾದರೂ ಉದ್ಯೋಗ ಮಾಡುತ್ತಿರಬಹುದು.ಬ್ಯಾಂಕರ್, ಪೋಸ್ಟ್ ಮ್ಯಾನ್ ಅಥವಾ......."
"ಅಥವಾ ಏನು.."??ಪ್ರಶ್ನಿಸಿದ
"ಒಂದು ರೀತಿ ಕಲೆಗಾರನೇ ಇರಬಹುದು, ಆಗಾಗ ತನ್ನ ವೇಷ ಬದಲಾಯಿಸುತ್ತಿರಬಹುದು."
"ನಡೀ..ಇಲ್ಲಿಂದ.."ಅಬ್ಬರಿಸಿದ
"ನಿನ್ನ ಹತ್ರ ಬಂದೂಕು ಇದೆಯಾ? ಪ್ಲೀಸ್ ಶೂಟ್ ಮಾಡ್ಬೇಡ..." ಆಕೆ ಚೀರಿದಳು
"ನಿಲ್ಲಿಸು.. ನನ್ನ ಹತ್ರ ಗನ್ ಇಲ್ಲ.ನನಗೆ ನಿನ್ನ ಕೊಲ್ಲಬೇಕಾಗಿಲ್ಲ.,ನಾವು ಡೆವಿಲ್ ಬಗ್ಗೆ ಮಾತಾಡೋಣ.."
"ನೀನಂದಿದ್ದೇ ಸರಿ.ಇಲ್ಲಿ ಟಾಪ್ ವನ್ ಗಾಗಿ ಪೈಪೋಟಿ ಇದೆ.ಪ್ರಾಯಶಃ ಅವನು ನಿನ್ನನ್ನು ಫಾಲೋ ಮಾಡುತ್ತಿರಬಹುದು, ನಿಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಿರಬಹುದು."ಅಂದಳು ಆಕೆ
ಕಾರು ಒಂದೇ ವೇಗದಲ್ಲಿ ಚಲಿಸುತ್ತಿತ್ತು
"ನಿನ್ನ ನಿತ್ಯದ ಚಟುವಟಿಕೆಗಳ ಬಗ್ಗೆ ಅವನಿಗೆ ಬೇಕಾದಷ್ಟು ಮಾಹಿತಿ ಇದೆ ಅನ್ನಿಸುತ್ತೆ, ನೀನು ಕೆಲಸ ಮಾಡುವ ರೀತಿ, ನೀನು ಜನರನ್ನು ಆರಿಸುವ ರೀತಿ, ನಿನ್ನ ಬೇಕು ಬೇಡಗಳ ಬಗ್ಗೆ, ಹೀಗೆ ಪೂರ್ತಿ ಚಿತ್ರಣವೇ ಇರಬಹುದು ಅವನ ಬಳಿ."
"ಆಮೇಲೆ...."
"ನನ್ನದೊಂದು ಸಿದ್ಧಾಂತ ಇದೆ.."
"ಸಿದ್ಧಾಂತ..."?? ತಾಳ್ಮೆ ಕಳೆದುಕೊಂಡು ಅರಚಿದ
"ಆ ಡೆವಿಲ್ ಮನುಷ್ಯನೇ ಆಗಿರದಿದ್ದರೆ.."?
"ಅಂದ್ರೆ ನೀನು ಹೇಳುವುದು..ಆತ ದೆವ್ವ ಅಥವಾ ಬೇರೇನೋ..??
"ನಿನ್ನನ್ನೂ ಸೇರಿಸಿ ಎಲ್ಲರೂ ಆತ ಒಬ್ಬ ಪುರುಷನೆಂದೇ ತಿಳಿದು ಕಾಯುತ್ತಿದ್ದಾರೆ.ಆದ್ರೆ ಆ ಡೆವಿಲ್ ಒಬ್ಬ ಹೆಣ್ಣಾಗಿದ್ದರೆ? ಇತ್ತ ಪೋಲೀಸರು ಕೂಡಾ ಹೊಂಚು ಹಾಕಿ ಕಾಯುತ್ತಿದ್ದರೆ, ಆಕೆ ಸುಲಭವಾಗಿ ಕೊಲೆ ಮಾಡಿ ಮುಗಿಸುತ್ತಿದ್ದಾಳೆ.ಅವಳಿಗೆ ನಿನ್ನ ಬಗ್ಗೆ ಗೊತ್ತು ,ನಿನ್ನ ಬಗ್ಗೆ ಮಾಹಿತಿಯಿದೆ.ನೀನು ಕೊಲೆ ಮಾಡುವಾಗ ತೆಗೆದ ಚಿತ್ರಗಳು ಅವಳ ಬಳಿ ಇವೆ".
ಆಕೆ ಕನಸಲ್ಲಿ ಮಾತಾಡುತ್ತಿರುವಂತೆ ಭಾಸವಾಯಿತು ಅವನಿಗೆ.
"ಇನ್ನು ಕಾಯುವುದು ಸಾಧ್ಯವಿಲ್ಲ ಎಂದು ತಿಳಿದ ಆಕೆ ಕೊನೆಗೂ ನಿರೀಕ್ಷೆಯ ಆ ಕಡೇ ದಿನವನ್ನು ನಿರ್ಧರಿಸಿದಳು..ಬಲೆ ಬೀಸುವವಳಂತೆ ನಿನ್ನ ದಾರಿಗಾಗಿ ಕಾದು ಕುಳಿತಳು, ಮತ್ತೆ ನಿನ್ನೊಂದಿಗೆ ಪ್ರಯಾಣಕ್ಕಾಗಿ ಒಂದು ಅವಕಾಶ ಕೇಳಿದಳು."
ಕಾರು ಸಡನ್ನಾಗಿ ನಿಂತಿತು, ಈಗ ಆತ ಹೆದರಿ ಬಿಟ್ಟಿದ್ದ.
ಹೊರಗಡೆ ನೋಡಿದರೆ ಒಂದೆಡೆ ಪ್ರಪಾತ ಕಾಣುತ್ತಿತ್ತು.ಇನ್ನೊಂದೆಡೆ ಮರಗಳು ಅಲ್ಲಾಡುವಂತೆ ಜೋರಾಗಿ ಗಾಳಿ ಬೀಸುತ್ತಿತ್ತು.ಆದರೆ ಕಾರಿನ ಕಿಟಕಿ ಬಾಗಿಲುಗಳು ಭದ್ರವಾಗಿ ಮುಚ್ಚಿದ್ದರಿಂದ ಒಳಗೆ ಅದರ ಅನುಭವವಾಗುತ್ತಿರಲಿಲ್ಲ.
ಕೆಲ ಹೊತ್ತು ಅಲ್ಲಿ ಮೌನ ಆವರಿಸಿತ್ತು.
ಅಷ್ಟರಲ್ಲಿ ಆಕೆ ಅವನ ಕೆನ್ನೆಗೆ ಗುರಿಯಿಡುತ್ತಾ "ಕೆಲವು ನಿಮಿಷಗಳ ಹಿಂದೆ ನಿನ್ನ ಬಳಿ ಈಗ ಗನ್ ಇಲ್ಲ ಎಂಬುದನ್ನು ನೀನೇ ಸುಲಭವಾಗಿ ಒಪ್ಪಿಕೊಂಡು ಬಿಟ್ಟೆ,ಆದರೆ ನನ್ನ ಈ ಸಣ್ಣ ಹ್ಯಾಂಡ್ ಬ್ಯಾಗ್ ನಲ್ಲಿ ಅದು ಈಗಲೂ ಇದೆ..!"ಅನ್ನುವಾಗ ಆಕೆಯ ಮುಖದಲ್ಲಿ ನಗುವಿತ್ತು..!
                   
                 *******************************




ಶುಕ್ರವಾರ, ನವೆಂಬರ್ 16, 2012

ದುರಂತ

 ಹೀಗೊಂದು ಕಥೆ....
     ಕಳೆದ ಎರಡು ವಾರಗಳಿಂದ ಶ್ಯಾಮರಾಯರ ಮನಸ್ಸಿಗೆ ಸಮಾಧಾನವಿರಲಿಲ್ಲ.ರಾತ್ರಿ ಮಲಗಿದರೆ ನಿದ್ದೆಯೂ ಹತ್ತುತ್ತಿರಲಿಲ್ಲ.ಎರಡು ವಾರದ ಹಿಂದೆ ನಡೆದ ಆ ಘಟನೆ ಕಣ್ಣ ಮುಂದೆ ಬಂದು ಅವರ ಕೋಪ ನೆತ್ತಿಗೇರುವಂತೆ ಮಾಡುತ್ತಿತ್ತು.ಆ ಘಟನೆ ಬೇರೆ ಯಾರಿಗೂ ಸಂಬಂಧಿಸಿದ್ದರೂ ಈ ಮಟ್ಟದ ಸುದ್ದಿಯಾಗುತ್ತಿರಲಿಲ್ಲವೇನೋ!ಆದರೆ ಶ್ಯಾಮರಾಯರೇ ಅದರಲ್ಲಿ ಭಾಗಿಯಾಗಿದ್ದಾರೆಂದ ಮೇಲೆ ಊರಿಡೀ ಪ್ರಚಾರದ ತೀವ್ರ ಸ್ವರೂಪ ಪಡೆಯಲು ಹೆಚ್ಚು ಸಮಯ ಬೇಕಾಗಲಿಲ್ಲ.ತಾನು ಇದುವರೆಗೆ ಕಾಪಾಡಿಕೊಂಡು ಬಂದಿದ್ದ ಘನತೆಗೆ ಒಂದೆಡೆ ಕುತ್ತು ಬಂದಿದ್ದರೆ,ಇನ್ನೊಂದೆಡೆ ತನಗೊಬ್ಬ ವೈರಿ ಹುಟ್ಟಿಬಿಟ್ಟನಲ್ಲಾ! ಎಂಬ ದಿಗಿಲು.ಇವೆರಡೂ ರಾಯರನ್ನು ನಿದ್ದೆಗೆಡುವಂತೆ ಮಾಡಿದ್ದವು.ಈವರೆಗೆ ತಾನು ಮಾಡಿದ್ದೇ ಸರಿ,ನಡೆದಿದ್ದೇ ದಾರಿ ಎಂಬಂತಿದ್ದ ರಾಯರ ಬದುಕಿನಲ್ಲಿ ಆ ಘಟನೆ ದೊಡ್ಡ ಮಟ್ಟದ ಆಘಾತವನ್ನೇ ನೀಡಿತ್ತು.ನಿನ್ನೆ ಅದಕ್ಕೊಂದು ತೆರೆ ಎಳೆದ ಮೇಲೆಯೇ ಅವರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದು.
   ಸುಮಾರು ನೂರೈವತ್ತು ಇನ್ನೂರು ಮನೆಗಳಿರುವ ಆ ಊರಿನಲ್ಲಿ ಇವರದೇ ದೊಡ್ಡ ಮನೆತನ. ಮನೆಯಲ್ಲಿ ಪುಟ್ಟ ಸಂಸಾರ ಒಬ್ಬಳೇ ಮಗಳು.ಎಲ್ಲರೂ ತಿಳಿದಂತೆ ಆತ ದೊಡ್ಡ ದೈವ ಭಕ್ತ.ತಾನು ಏನು ಮಾಡಿದರೂ ಅದೆಲ್ಲಾ ತಾನು ನಂಬಿಕೊಂಡು ಬಂದಿರುವ ಕಲ್ಕುಡನ ಕಾರ್ಣಿಕದ ಬಲ ಎನ್ನುತ್ತಿದ್ದರು.ಹೀಗೆ ಎಲ್ಲ ಕೆಲಸಗಳನ್ನು ದೈವವನ್ನೇ ಮುಂದಿರಿಸಿಕೊಂಡೇ ಮುಗಿಸುತ್ತಾ ಬರುತ್ತಿದ್ದರು.ಹೀಗಾಗಿ ಇಡೀ ಊರಿಗೆ ಶ್ಯಾಮರಾಯರ ಹೆಸರೆತ್ತಿದರೆ ಸಾಕು,ಒಂದು ರೀತಿಯ ಭಯ,ಅವರ ದೈವವೆಂದರೆ ಇನ್ನೂ ಎಲ್ಲಿಲ್ಲದ ಭಯ.ಅವರನ್ನು ಇದುವರೆಗೆ ಎದುರು ಹಾಕಿಕೊಂಡವರಿಲ್ಲ.ಎದುರಾಡಿದವರು ಬದುಕಿ ಉಳಿದಿಲ್ಲ.ಅವರ ತಂಟೆಗೆ ಹೋದರೆ ಅದರ ಪರಿಣಾಮವನ್ನು ಊಹಿಸಿಯೇ ಜನ ಸುಮ್ಮನಾಗುತ್ತಿದ್ದರು. ಅಷ್ಟು ಜೋರಿನ ರಾಯರು ಹಾಗೂ ಅವರ ದೈವ.ಅದರಲ್ಲಿ ಎರಡು ಮಾತಿಲ್ಲ.ಇದು ಇಡೀ ಊರೇ ನಂಬಿದ ವಿಚಾರ.ಪೆಟ್ಟೊಂದು ತುಂಡೆರಡು !!ಎಂಬ ರೀತಿ, ಹೀಗೆ ಒಂದು ರೀತಿಯ ಹಿಡಿತವನ್ನೇ ಆ ಊರಲ್ಲಿ ಸಾಧಿಸಿಕೊಂಡು ಬಂದಿದ್ದರು.
    ಈಗಲೂ ರಾಯರು ಮಾತಾಡುತ್ತಿರಬೇಕಾದರೆ,ಕೆಲವು ವರ್ಷಗಳ ಹಿಂದೆ ತಮ್ಮ ಹಸು ಪಕ್ಕದ ಅಚ್ಚಪ್ಪನ ಗದ್ದೆಯ ನೇಜಿ ತಿನ್ನುತ್ತಿದ್ದಾಗ ಅವನ ಕಲ್ಲಿನ ಏಟು ಬಿದ್ದು ಹಸು ಸತ್ತಿದ್ದು,ಕೊನೆಗೂ ಒಂದು ದಿನ ಆತ ಬಿದ್ದು ತಲೆ ಒಡೆದು ಅವನಿಗೆ ಹುಚ್ಚು ಹಿಡಿಯುವಂತಾಗಿದ್ದು.ಹಾಗೆಯೇ ಮೂಲೆಮನೆಯ ಚೀಂಕ್ರ ಕೂಡಾ ತಮ್ಮ ಮನೆಯ ತೋಟದ ಕಂಗಿನಿಂದ ಅಡಿಕೆ ಕದಿಯಲು ಹೋಗಿ ಮರದಿಂದ ಬಿದ್ದು ಸೊಂಟ ಮುರಿದು ನೆಗರುತ್ತಿರುವುದನ್ನು ಕಂಡು ತಮ್ಮ ದೈವದ ಕಾರಣಿಕದ ಬಗ್ಗೆ ಊರಿಡೀ ಹೇಳಿಕೊಂಡು ಮೀಸೆ ತಿರುವಿಕೊಳ್ಳುತ್ತಾರೆ.ಆದರೆ ಅವರೆಲ್ಲಾ ಈ ಸ್ಥಿತಿಗೆ ಬರಲು ಕಾರಣ ರಾಯರ ಪೆಟ್ಟೇ ಹೊರತು ಭೂತದ್ದಲ್ಲ ಎಂದು ಹೇಳುವ ಧೈರ್ಯ ಯಾರಿಗೂ ಇರಲಿಲ್ಲ.
      ಆ ಘಟನೆ ನಡೆದು ಇಂದಿಗೆ ಸುಮಾರು ಮೂರು ವಾರಗಳಾಗುತ್ತ ಬಂದಿವೆ.ನನ್ನ ನಾಶಕ್ಕೆ ಗುರಿಯಿಟ್ಟವನನ್ನು ಹಿಡಿದು ತಕ್ಕ ಶಿಕ್ಷೆ ವಿಧಿಸಿದರೆ ನಿನಗೆ ನೇಮ ಕೊಡುತ್ತೇನೆ ಎಂದು ಎಂದಿನಂತೆ ಎಲ್ಲರ ಮುಂದೆ ತಾನು ನಂಬಿದ ದೈವ ಕಲ್ಕುಡನಿಗೆ ಹರಕೆ ಹೊತ್ತಿದ್ದರು..ಹೀಗೆ ಅವರು ಅಂದುಕೊಂಡಿದ್ದೆಲ್ಲಾ ಸುಸೂತ್ರವಾಗಿ ನಡೆದಿತ್ತು.ಹೀಗೆ ಅವರ ಮನೆಯಲ್ಲಿ ಅಂದು ಕಲ್ಕುಡನ ನೇಮಕ್ಕೆ ತಯಾರಿ ನಡೆಯುತಿತ್ತು.ಕೊಂಬು ವಾದ್ಯ ತೆಂಬರೆ ಪಾಡ್ದನದ ದನಿ ಹೊಸ ಅಲೌಕಿಕ ಪ್ರಪಂಚವನ್ನೇ ಸೃಷ್ಟಿಸಿದಂತಿತ್ತು.ಸೇರಿದ್ದ ಮಂದಿಯ ಗದ್ದಲ ಜಾತ್ರೆಯನ್ನು ಹೋಲುವಂತಿತ್ತು.ಆದರೆ ನೆರೆಯ ನೀಲಕ್ಕನಿಗೆ ಈ ಗೌಜಿ ಗದ್ದಲ ಕಂಡೊಡನೆ ಚೂರಿಯಿಂದ ಇರಿದಂತಾಗುತ್ತಿತ್ತು,ತನ್ನ ಕಣ್ಣುಗಳೇ ಕಿತ್ತು ಬಂದಂತೆ ಭಾಸವಾಗಿ ಕಣ್ಣೀರ ಹನಿ ಅವಳಿಗರಿವಿಲ್ಲದಂತೆ ಕೆಳಗಿಳಿಯುತ್ತಿತ್ತು.
     ನೀಲಕ್ಕ ಮತ್ತು ನಾರ್ಣಪ್ಪ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಕೊನೆಯವನೊಬ್ಬನೇ ಗಂಡು ಮಗು ಚಂದ್ರ.ಮನೆಯಲ್ಲಿ ತೀರ ಬಡತನವಿದ್ದರೂ ಹೊಟ್ಟೆಬಟ್ಟೆಗೇನೂ ಕಡಿಮೆ ಮಾಡಿರಲಿಲ್ಲ.ನಮ್ಮ ಮನೆಗೆ ಇವನೊಬ್ಬನೇ ವಂಶೋದ್ದಾರಕ ಎಂದು ಎಲ್ಲರಿಗಿಂತಲೂ ಹೆಚ್ಚು ಮುದ್ದಿನಿಂದಲೇ ಸಾಕಿದ್ದರು.ಪತಿ ನಾರ್ಣಪ್ಪ ಹೆಣ್ಣು ಮಕ್ಕಳಿಗೆಲ್ಲ ಮದುವೆ ಮಾಡಿ ತನ್ನ ಹೊರೆ ಇಳಿಸಿ ಇಹಲೋಕದ ಯಾತ್ರೆ ಮುಗಿಸಿದಾಗ ಚಂದ್ರ ಇನ್ನೂ ಸಣ್ಣವನು.ಇವನು ಚೆನ್ನಾಗಿ ಓದಿ ಮುಂದೆ ಬರಬೇಕೆಂಬ ಹಂಬಲ ನೀಲಕ್ಕನದಾಗಿದ್ದರೂ ಈ ಬಡತನದ ಮಧ್ಯೆ ಆಕೆ ಅಸಹಾಯಕಳಾಗಿದ್ದಳು.ಓದಿನಲ್ಲಿ ಮುಂದೆ ಇದ್ದ ಆತ ಶಾಲೆಗೆ ಅರ್ಧದಲ್ಲಿಯೇ ಪೂರ್ಣ ವಿರಾಮವಿಟ್ಟು, ಬದುಕಿನಲ್ಲಿ ಒಂದು ನೆಲೆ ಕಂಡುಕೊಳ್ಳುವ ದೃಷ್ಟಿಯಿಂದ ಓಡಿ ಬಂದಿದ್ದು ಮುಂಬಯಿಗೆ..
    ಆರಂಭದ ದಿನಗಳಲ್ಲ್ಲಿ ಊರಿನ ಪರಿಚಯದವರ ಹೋಟೆಲುಗಳಲ್ಲಿ ಕೆಲಸ ಮಾಡುತ್ತಾ,ಹೋಟೇಲ್ ಹುಡುಗರ ಬದುಕಿಗೆ ದಾರಿ ದೀಪವಾಗಿದ್ದ ಸಂಜೆ ಕಾಲೇಜಿಗೆ ಸೇರಿ, ಪದವಿ ಮುಗಿಸಿ ಅಲ್ಲಿಯೇ ದಿನಪತ್ರಿಕೆ ಕಚೇರಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ನಂತರ ಆತನ ಬದುಕಿನ ದಿಕ್ಕು ಬದಲಾಗಿತ್ತು.ಇತ್ತ ನೀಲಕ್ಕನಿಗೂ ವಯಸ್ಸಾಗತೊಡಗಿತ್ತು..ಆಕೆಗೂ ಇಲ್ಲಿ ಯಾರೂ ದಿಕ್ಕು ದೆಸೆಯಿರಲಿಲ್ಲ.ಸುಮಾರು ಆರೇಳು ವರ್ಷಗಳನ್ನು ಕಳೆದ ಚಂದ್ರ ಇದನ್ನೆಲ್ಲಾ ಯೋಚಿಸಿ, ಮನಸ್ಸು ಬದಲಾಯಿಸಿ ಊರ ಕಡೆ ಮುಖ ಮಾಡಿದ್ದ.ಊರಿಗೆ ಬಂದವನಿಗೆ ಕೆಲಸ ಸಿಗುವುದೇನೂ ಕಷ್ಟವಾಗಲಿಲ್ಲ.ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಸೇರಿಕೊಂಡ ಆತ ಅಲ್ಪ ಸಮಯದಲ್ಲಿಯೇ ಎಲ್ಲರಿಗೂ ಮೆಚ್ಚುಗೆಯಾಗಿ ಬಿಟ್ಟಿದ್ದನು.ತನ್ನ ವರದಿ ವಿಶ್ಲೇಷಣೆಗಳಿಂದ ಜನಪ್ರಿಯನಾಗಿ ಬಿಟ್ಟಿದ್ದನು.ಅನೇಕ ಜನರ ಘನಂದಾರಿ ಕೆಲಸಗಳ ಬಂಡವಾಳ ಬಯಲು ಮಾಡಿ ಸಮಾಜ ಸುಧಾರಣೆಯ ಪಣ ತೊಟ್ಟಿದ್ದನು.ಹೀಗಾಗಿ ಅವನ ಬರಹಗಳಿಗೆ ಅಭಿಮಾನಿಗಳು ಸಾಕಷ್ಟಿದ್ದರು.ಇವನ ಬರಹಗಳಿಗೆ ಧೈರ್ಯ ಹುಮ್ಮಸ್ಸು ತುಂಬುತ್ತ ಇದ್ದವರಲ್ಲಿ ಸೌಮ್ಯ ಕೂಡಾ ಒಬ್ಬಳು.ಈಕೆ ಬೇರಾರೂ ಅಲ್ಲ, ಶ್ಯಾಮರಾಯರ ಮುದ್ದಿನ ಮಗಳು.ಇನ್ನೂ ಪದವಿ ಓದುತ್ತಿದ್ದ ಆಕೆಗೆ ಇವನ ಬರಹ ಅಂಕಣಗಳೆಂದರೆ ಅಚ್ಚುಮೆಚ್ಚು.ಜೊತೆಗೆ ಅವನನ್ನೂ ಕೂಡಾ ಬಹಳವಾಗಿ ಮೆಚ್ಚಿಕೊಂಡಿದ್ದಳು, ಇಷ್ಟಪಟ್ಟಿದ್ದಳು.ಅವನಿಗೂ ಅವಳ ಒಂದೊಂದು ಅಭಿಮಾನದ ಮಾತು ಪ್ರೇರಣೆ ನೀಡುತ್ತಿತ್ತು.ಹೀಗೆ ಅವರ ಅಭಿಮಾನದ ಗೆಳೆತನ ಅನುರಾಗದವರೆಗೆ ಬಂದು ಮುಟ್ಟಲು ಹೆಚ್ಚು ಸಮಯ ಬೇಕಾಗಲಿಲ್ಲ.ಇದು ಇವರಿಬ್ಬರ ಹೊರತಾಗಿ ಮೂರನೆಯವರ ಕಣ್ಣಿಗೆ ಬಿದ್ದಿರಲಿಲ್ಲ.
    ಹೀಗಿರಬೇಕಾದರೆ ನೆರೆಯ ಕರಿಯಪ್ಪನ ನಡುವೆ ಹಾಗೂ ಶ್ಯಾಮರಾಯರ ನಡುವೆ ಜಾಗದ ತಕರಾರು ಎದ್ದಿತ್ತು.ರಾಯರ ತೋಟದ ಮನೆಯಿದ್ದ ಜಾಗದ ಸ್ವಲ್ಪ ಭಾಗ ತನ್ನದೆಂಬುದು ಅವನ ವಾದ ಆದರೆ ಆ ಜಾಗದ ಬಗ್ಗೆ. ಮಕ್ಕಳಿಲ್ಲದೆ ಹಿಂದುಮುಂದಿಲ್ಲದ ಅವನಿಗೆ ಅಷ್ಟೇನೂ ಒಲವಿರಲಿಲ್ಲ.ಆದರೂ ರಾಯರಿಗಾಗದ ಕೆಲವರು ಅವನ ಕಿವಿಯೂದಿ ಜಗಳಕ್ಕೆ ಕುಮ್ಮಕ್ಕು ನೀಡಿ ತಾವು ಖುಷಿ ಪಡುತ್ತಿದ್ದರು.ಅದೊಂದು ದಿನ ತಡರಾತ್ರಿ ಸೇರಿದ ರಾಯರಿಗಾಗದ ಕೆಲವರು ಈ ರೀತಿ ಕಾದಾಡುತ್ತಿದ್ದರೆ ಲಾಭವಿಲ್ಲ, ರಾಯರ ತೋಟದ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ದಂಧೆ ನಡೆಯುತ್ತಿರುವುದು ಇಂದು ನಿನ್ನೆಯದಲ್ಲ.ಈ ವಿಷಯ ತಿಳಿದಿದ್ದವರು ಯಾರೂ ಪೋಲೀಸರಿಗೆ, ಅಧಿಕಾರಿಗಳಿಗೆ ತಿಳಿಸುವ ಧೈರ್ಯ ಮಾಡಿರಲಿಲ್ಲ.ಈ ಸಂಗತಿ ಒಮ್ಮೆ ಹೊರಕ್ಕೆ ಬಂದರೆ ರಾಯರ ಮಾನ ಹರಾಜಾಗುತ್ತದೆ, ರಾಯರು ಒಮ್ಮೆ ಕಂಬಿ ಎಣಿಸಿದರೆ ಮತ್ತೆ ನಮ್ಮ ತಂಟೆಗೆ ಬರುವುದಿಲ್ಲ,ಎಂದು ಲೆಕ್ಕಾಚಾರ ಹಾಕಿ ತಂತ್ರ ಹೂಡಿದರು.ಆದರೆ ಆ ಧೈರ್ಯ ಮಾತ್ರ ಅಲ್ಲಿ ಯಾರಿಗೂ ಇರಲಿಲ್ಲ.ಆಗ ಅವರ ಕಣ್ಣಿಗೆ ಬಿದ್ದವನೇ ಚಂದ್ರ.ಅವನೂ ಅಷ್ಟೇ ಹಿಂದು ಮುಂದು ಯೋಚಿಸದೆ ಮೊಂಡು ಧೈರ್ಯ ಮಾಡಿ ರಾಯರು ನಾಲ್ಕು ದಿನಗಳ ಮಟ್ಟಿಗೆ ಕಂಬಿ ಎಣಿಸುವಂತೆ ಮಾಡಿ ರಾಯರ ಸ್ವಾಭಿಮಾನಕ್ಕೆ ಕೆಸರೆರಚಿದ್ದ.ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ರಾಯರು ಮನಸ್ಸಿನಲ್ಲಿಯೇ ಕುದಿಯ ತೊಡಗಿದರು.ಕರಿಯಪ್ಪನೇ ಯಾರದೋ ಒತ್ತಡಕ್ಕೆ ಬಿದ್ದು ಈ ಕೆಲಸ ಮಾಡಿರಬಹುದು ಎಂಬ ಸಂಶಯದ ಸುಳಿಯೊಂದು ಅವರ ಸುತ್ತ ಸುತ್ತುತ್ತಿತ್ತು.ನನ್ನ ಈ ಸ್ಥಿತಿಗೆ ಕಾರಣನಾದವನ ಗತಿ ಕಾಣಿಸದೆ ಬಿಡಲಾರೆ ಎಂದು ಪಣತೊಟ್ಟ ಅರು ಎಂದಿನಂತೆ ತಾನು ನಂಬಿದ ದೈವ ಕಲ್ಕುಡನಿಗೆ ಹರಕೆಯಿಟ್ಟರು.ಈಗ ಅವರ ಮನಸ್ಸು ನಿರಾಳವಾಗಿತ್ತು.
     ಹೀಗೆ ಒಂದೆರಡು ದಿನ ಕಳೆದಿರಬೇಕು, ಮನೆಗೆಲಸದ ಮಂಜು ಹೇಳಿದ ಮಾತು ಕೇಳಿ ಅವರಿಗೆ ನಂಬಲಾಗಲಿಲ್ಲ."ಹೌದು ಧಣೀ ನಿನ್ನೆ ವಸಂತನ ಗೂಡಂಗಡಿಯ ಹತ್ರ ಇದೇ ಸುದ್ದಿ ಮಾತಾಡುತ್ತಿದ್ದರು.ನನಗೂ ನಂಬಿಕೆ ಬರಲಿಲ್ಲ ಆದರೆ ವಿಷಯ ಎಲ್ಲಾ ತಿಳಿದಾಗ ನನಗೂ ಇದು ನಿಜ ಇರಬೇಕೆಂದು ನಂಬಿಕೆ ಬಂತು"ಎಂದಾಗ ರಾಯರಿಗೆ ಅಷ್ಟೇ ಸಾಕಿತ್ತು.ನನ್ನ ಕಣ್ಣ ಮುಂದೆಯೇ ಬೆಳೆದು ಈಗ ನನ್ನ ನಾಶಕ್ಕೆ ಪಣ ತೊಟ್ಟವನ ಸರ್ವನಾಶ ಮಾಡದೆ ಇರಲಾರೆ ಎಂದು ಹಲ್ಲು ಮಸೆಯತೊಡಗಿದರು.
    ಆ ದಿನ ಸಂಜೆ ಚಂದ್ರ ಎಂದಿನಂತೆ ತನ್ನ ಬೈಕನ್ನು ಎಂಭತ್ತರ ವೇಗದಲ್ಲಿ ಹಾರಿಸಿಕೊಂಡು ಬರುತ್ತಿದ್ದಾಗ ಅಡ್ಡವಾಗಿ ಬಂದ ಲಾರಿಯೊಂದು ಢಿಕ್ಕಿ ಹೊಡೆದು ಹೋದ ರಭಸಕ್ಕೆ ಅವನ ಪ್ರಾಣ ಪಕ್ಷಿ ಅಲ್ಲೇ ಹಾರಿ ಹೋಗಿತ್ತು.ಆ ಜನ ವಸತಿ ರಹಿತ ಪ್ರದೇಶದಲ್ಲಿ ಢಿಕ್ಕಿ ಹೊಡೆದ ಲಾರಿ ರಾಯರದ್ದೇ ಎಂದು ಕೊನೆಗೂ ಯಾರಿಗೂ ತಿಳಿಯಲೇ ಇಲ್ಲ.
    ಮರುದಿನ ಎಲ್ಲೆಡೆ ಸುದ್ದಿಯಾಗಿತ್ತು.ನೀಲಕ್ಕನ ಮಗ ನಿನ್ನೆ ಬೈಕ್ ಆಕ್ಸಿಡೆಂಟ್ ನಲ್ಲಿ ತೀರಿ ಹೋದನಂತೆ,ರಾಯರ ಬಗ್ಗೆ ಪೋಲೀಸ್ ಕೇಸು ಕೊಟ್ಟಿದ್ದು ಅವನೇ ಅಂತೆ.ಅವನು ರಾಯರ ಭೂತದ ಉಪದ್ರವದಿಂದಲೇ ಸತ್ತಿದ್ದು ಅಂತ ಕಾಣುತ್ತೆ.ಅವರನ್ನು ಎದುರು ಹಾಕಿಕೊಂಡ್ರೆ ಬರ್ಕತ್ತಾಗಲಿಕ್ಕುಂಟಾ?....ಎಂದು ಊರಿಡೀ ಸುದ್ದಿಯಾಯಿತು.ಆದರೆ ನೀಲಕ್ಕನಿಗೆ ಎಲ್ಲ ಅರ್ಥವಾಗತೊಡಗಿತ್ತು.ಯಾರದೋ ಒತ್ತಡಕ್ಕೆ ಬಲಿಯಾಗಿ ತನ್ನ ಮಗ ತಂದುಕೊಂಡ ದುರಂತದ ಸಾವೆಂದು ಅವಳ ಮನಸ್ಸು ಹೇಳುತ್ತಿತ್ತು.
    ಈ ದುರಂತ ನಡೆದ ನಂತರ ಸೌಮ್ಯಳ ಮನಸ್ಸು ಕೂಡಾ ಅಲ್ಲೋಲಕಲ್ಲೋಲವಾಗಿತ್ತು.ಚಂದ್ರನನ್ನು ಕಳೆದುಕೊಂಡ ಆಕೆಯ ಹೃದಯ ಕತ್ತಲಾಗಿತ್ತು.ಮನಸಾರೆ ಪ್ರೀತಿಸುತ್ತಿದ್ದ ಆಕೆಗೆ ಅವನಿಲ್ಲದೆ ಹೃದಯ ನೋವಿನ ಕಡಲಾಗಿತ್ತು.ತನ್ನ ತಂದೆಯವರೇ ಈ ಘಟನೆಗೆ ಕಾರಣವೆಂದು ತಿಳಿದಾಗ "ನಾನು ಯಾಕಾದರೂ ಈ ಮನೆಯಲ್ಲಿ ಹುಟ್ಟಿದೆ?ನನ್ನ ಯಾವ ತಪ್ಪಿಗೆ ಈ ಶಿಕ್ಷೆ" ಎಂದು ಮನಸ್ಸು ರೋದಿಸುತ್ತಿತ್ತು.ಅವಳ ಬದುಕು ಕಳೆಗುಂದಿತ್ತು.ಆದರೆ ಇದು ಯಾವುದೂ ರಾಯರ ಗಮನಕ್ಕೇ ಬಂದಿರಲಿಲ್ಲ.ತನ್ನ ಶತ್ರುವೊಬ್ಬನನ್ನು ಮುಗಿಸಿದ ಸಂತೋಷದಲ್ಲಿ ಅವರು ತೇಲಾಡುತ್ತಿದ್ದರು.
     ಈ ನಿಮಿತ್ತ ರಾಯರ ಮನೆಯಲ್ಲಿ ದೈವದ ನೇಮಕ್ಕೆ ತಯಾರಿ ನಡೆಯುತ್ತಿತ್ತು.ಗಗ್ಗರದ ದನಿ ಕೇಳುತ್ತಿದ್ದಂತೆ ಮುಖದಲ್ಲಿ ಮಂದಹಾಸವೊಂದು ಮಿಂಚಿ ಮಾಯವಾಗುತ್ತಿತ್ತು.ತನ್ನ ಗುರಿ ಸಾಧಿಸಿದ ಸಂತೃಪ್ತಿ ಮುಖದಲ್ಲಿ ಎದ್ದು ಕಾಣುತ್ತಿತ್ತು.ಇಷ್ಟೆಲ್ಲಾ ಸಂಭ್ರಮಗಳ ನಡುವೆ ತಮ್ಮ ಮುದ್ದಿನ ಮಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.ಮಗಳು ಎಲ್ಲೂ ಕಾಣದಿದ್ದುದನ್ನು ಕಂಡು ಮನಸ್ಸು ಕಳವಳಗೊಂಡು ಹುಡುಕುತ್ತಿದ್ದಾಗ ಮನೆಯ ಕೊಟ್ಟಿಗೆಯ ಪಕ್ಕಾಸಿನಲ್ಲಿ ಸೌಮ್ಯಳ ಶವ ನೇತಾಡುತಿತ್ತು.ಅದರ ಕಾರಣ ತಿಳಿಯುವ ಹೊತ್ತಿಗೆ ಕಾಲ ಮಿಂಚಿತ್ತು.
                 *********************

ಗುರುವಾರ, ನವೆಂಬರ್ 1, 2012

                                               ನಿರೀಕ್ಷೆ.......


                                       ಸಂಜೆಬಣ್ಣ ಕಳೆದು ಕತ್ತಲೆಡೆಗೆ ಸರಿವ
                                       ಮಾಗಿಹೋದ ಕರಗುತಿರುವ ಬಾನು
                                       ನಿನ್ನ ಪ್ರೀತಿಗಾಗಿ ಹೀಗೆ ಶಬರಿಯಂತೆ
                                       ದಿನವೂ ನೆನೆದು ಕಾದಿರುವೆ ನಾನು..!

                                       
                                       ಬದುಕಿಸುತ್ತಿದೆ ಇನ್ನೂ ನನ್ನ 
                                       ಇಂದಲ್ಲ ನಾಳೆ ಬರುವೆಯೆಂಬ 
                                       ಒಂದೇ ಒಂದು ನಿರೀಕ್ಷೆ....
                                       ನಿನ್ನೊಡನಾಟದ ನೆನಪುಗಳೇ
                                       ಈ ಬದುಕಿನ ಸತ್ವಪರೀಕ್ಷೆ....

                                       
                                       ನೋಡಿದ್ದು., ಕೂಡಿದ್ದು.., ಕಳೆದಿದ್ದು...
                                       ಹೀಗೆ ಲೆಕ್ಕವಿರದ ದಿನಗಳೆಷ್ಟೋ..
                                       ನನ್ನ ಖಾಲಿ ಬದುಕ ಪುಸ್ತಕದಲಿ
                                       ನೀ ಗೀಚಿ ಹೋದ ಪುಟಗಳೆಷ್ಟೋ..!

                                      
                                       ಮರೆತು ಬಿಡಲಿ ಹೇಗೆ? ಗೆಳೆಯ
                                       ನಿನ್ನ ಆ ಕಣ್ಣ ಸೆಳೆವ ರೂಪ..
                                       ಎಲ್ಲೇ ಇರಲಿ..ಹೇಗೇ ಇರಲಿ
                                       ನಿನ್ನ ನೆನಪೇ ಬಾಳ ದಾರಿದೀಪ...