ಮಂಗಳವಾರ, ನವೆಂಬರ್ 5, 2024

ಕೆಲವು ದೀಪದ ಸಾಲುಗಳು

ಕತ್ತಲು ಎಂದರೆ ಅವ್ಯಕ್ತ ಭಯ

ಬೆಳಕೆಂದರೆ ಭರವಸೆ,ಅಭಯ

ಕತ್ತಲು ಎಂದರೆ ಕರಾಳ

ಬೆಳಕೆಂದರೆ ನಿರಾಳ

ಕತ್ತಲು ಎಂದೊಡನೆ ನೀರವ ಮೌನ

ಬೆಳಕೆಂದರೆ ಹೊಸ ಆಶಾ ಕಿರಣ

******

ಅಂಧಕಾರದ ಇರುಳಿನಲ್ಲಿ

ದೀಪ ಬೆಳಕ ತೋರುವವರು

ಇರುವರು ಬೆರಳೆಣಿಕೆಯಲ್ಲಿ

ಜೀವನದಲ್ಲಿ ನೆನಪಿಟ್ಟುಕೊಳ್ಳಿ

 ಬದುಕ ಸುಟ್ಟು ಬಿಡಲು

ಬತ್ತಿಯಿಡುವವರು

ಕೊಳ್ಳಿಯಿಡುವವರೇ ಹೆಚ್ಚು ಇಲ್ಲಿ!!

*****

ಇಲ್ಲಿ ಎಲ್ಲವೂ ನಿಜವಲ್ಲ

ಅವರವರ ಭಾವಕ್ಕೆ 

ಅವರವರ ದೃಷ್ಟಿಗೆ

ಸುಟ್ಟು ಬೂದಿಯಾಗಿಸುವ

ಕೆನ್ನಾಲಿಗೆಯ ಬೆಂಕಿಯ ಜ್ವಾಲೆ

ಹೊಳೆಯುವ ಬೆಳಕಿನಂತೆ

ದೂರದಿಂದ ಈ ಕಣ್ಣಿನ ದೃಷ್ಟಿಗೆ..!

*****

ಕಂಡದ್ದೆಲ್ಲವೂ ಪಡೆವ ಬಯಕೆ

ದುರಾಸೆ,ದುರಾಲೋಚನೆಗಳೇ

ಸುಟ್ಟು ಬಿಡುವುದು ನಮ್ಮನ್ನು

ಬೇಕಿದ್ದರೆ ನೋಡಿ..

ಬೆಳಕ ಕಂಡೊಡನೆ ದೀಪಕ್ಕೆ ಮುತ್ತಿಟ್ಟು 

ಸುಟ್ಟು ಸತ್ತು ಬಿಡುವ ಪತಂಗವನ್ನು !!

*****

ಗೆಳತೀ ನೀ ಹಚ್ಚಿಟ್ಟು 

ಹೋದೆಯಲ್ಲಾ ಪ್ರೀತಿ ಹಣತೆ 

ಹೃದಯದಲ್ಲಿ 

ನನಗೀಗ ಬಾಳಲ್ಲಿ 

ನಿತ್ಯ ದೀಪಾವಳಿ..!

******

ಹುಡುಗೀ...

ಈ ಉರಿವ ಹಣತೆ

ಈ ಸಾಲು ದೀಪ

ಎಲ್ಲ ನಮಗೆ ಯಾಕೆ ಬೇಕು?

ನಿತ್ಯ ಹೀಗೇ..

ಇದ್ದರೆ ಸಾಕು

ಮನೆ ಮನ ಬೆಳಗಲು

ನಿನ್ನ ಕಣ್ಣ ಬೆಳಕು..!

******

ಒಂದಷ್ಟು ದೀಪ ಹಚ್ಚಲು

ಮೂಡಿತು ಬೆಳಕು

ಮನೆಯ ಸುತ್ತಲೂ

ಆಗೊಮ್ಮೆ ಕಣ್ಣು ಮುಚ್ಚಲು

ಎಲ್ಲೆಲ್ಲೂ ಕತ್ತಲು !

ಅರಿವಾಯಿತು ಸತ್ಯ

ಮನೆಯಲಿದ್ದರಷ್ಟೆ ಸಾಲದು ಬೆಳಕು

ನಮ್ಮ ಮನದಲ್ಲಿರಬೇಕು !

*****

ಬೇರೊಬ್ಬರ ಒಳಿತನ್ನು ಕಂಡು  

ಉರಿಯುವ ಬದಲು

ಕತ್ತಲಲ್ಲಿದ್ದವರ ಬದುಕಲ್ಲಿ

ಮೊದಲು

ನಮ್ಮಿಂದ ಒಂದಿಷ್ಟು 

ಬೆಳಕಾದರೆ ಅಷ್ಟೇ ಸಾಕು..!

******

ಎಲ್ಲಿಂದಲೋ ದೂರದಿಂದ

ಆ ಸೂರ್ಯ ಚಂದ್ರ

ಪ್ರತಿಫಲವಿಲ್ಲದೆ 

ನೀಡುವರು ಭೂಮಿಗೆ ಬೆಳಕು

ಇಲ್ಲಿ ನಮ್ಮೊಡನಿದ್ದವರೇ 

ಕಾಯುವರು ಕತ್ತಲಾಗಲು

ನಮ್ಮ ಬದುಕು.

*******

ಉರಿವ ಬೆಂಕಿಯಲ್ಲಿ

ಚಳಿಯ ಕಾಯಿಸುವರು

ಬೇಳೆ ಬೇಯಿಸುವರು ಕೆಲವರು

ಹಚ್ಚಿ ದ್ವೇಷ ಸಂಶಯದ ಕಿಡಿ

ಕಿಚ್ಚು ಹೆಚ್ಚುವ ಬದಲಿಗೆ

ಬೆಳಕಾಗಲಿ ಕತ್ತಲಲ್ಲಿ

ಒಂದು ಹಣತೆ ಹಚ್ಚಿ ಬಿಡಿ.

*****

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ