ಮಂಗಳವಾರ, ನವೆಂಬರ್ 5, 2024

ಕೆಲವು ದೀಪದ ಸಾಲುಗಳು

ಕತ್ತಲು ಎಂದರೆ ಅವ್ಯಕ್ತ ಭಯ

ಬೆಳಕೆಂದರೆ ಭರವಸೆ,ಅಭಯ

ಕತ್ತಲು ಎಂದರೆ ಕರಾಳ

ಬೆಳಕೆಂದರೆ ನಿರಾಳ

ಕತ್ತಲು ಎಂದೊಡನೆ ನೀರವ ಮೌನ

ಬೆಳಕೆಂದರೆ ಹೊಸ ಆಶಾ ಕಿರಣ

******

ಅಂಧಕಾರದ ಇರುಳಿನಲ್ಲಿ

ದೀಪ ಬೆಳಕ ತೋರುವವರು

ಇರುವರು ಬೆರಳೆಣಿಕೆಯಲ್ಲಿ

ಜೀವನದಲ್ಲಿ ನೆನಪಿಟ್ಟುಕೊಳ್ಳಿ

 ಬದುಕ ಸುಟ್ಟು ಬಿಡಲು

ಬತ್ತಿಯಿಡುವವರು

ಕೊಳ್ಳಿಯಿಡುವವರೇ ಹೆಚ್ಚು ಇಲ್ಲಿ!!

*****

ಇಲ್ಲಿ ಎಲ್ಲವೂ ನಿಜವಲ್ಲ

ಅವರವರ ಭಾವಕ್ಕೆ 

ಅವರವರ ದೃಷ್ಟಿಗೆ

ಸುಟ್ಟು ಬೂದಿಯಾಗಿಸುವ

ಕೆನ್ನಾಲಿಗೆಯ ಬೆಂಕಿಯ ಜ್ವಾಲೆ

ಹೊಳೆಯುವ ಬೆಳಕಿನಂತೆ

ದೂರದಿಂದ ಈ ಕಣ್ಣಿನ ದೃಷ್ಟಿಗೆ..!

*****

ಕಂಡದ್ದೆಲ್ಲವೂ ಪಡೆವ ಬಯಕೆ

ದುರಾಸೆ,ದುರಾಲೋಚನೆಗಳೇ

ಸುಟ್ಟು ಬಿಡುವುದು ನಮ್ಮನ್ನು

ಬೇಕಿದ್ದರೆ ನೋಡಿ..

ಬೆಳಕ ಕಂಡೊಡನೆ ದೀಪಕ್ಕೆ ಮುತ್ತಿಟ್ಟು 

ಸುಟ್ಟು ಸತ್ತು ಬಿಡುವ ಪತಂಗವನ್ನು !!

*****

ಗೆಳತೀ ನೀ ಹಚ್ಚಿಟ್ಟು 

ಹೋದೆಯಲ್ಲಾ ಪ್ರೀತಿ ಹಣತೆ 

ಹೃದಯದಲ್ಲಿ 

ನನಗೀಗ ಬಾಳಲ್ಲಿ 

ನಿತ್ಯ ದೀಪಾವಳಿ..!

******

ಹುಡುಗೀ...

ಈ ಉರಿವ ಹಣತೆ

ಈ ಸಾಲು ದೀಪ

ಎಲ್ಲ ನಮಗೆ ಯಾಕೆ ಬೇಕು?

ನಿತ್ಯ ಹೀಗೇ..

ಇದ್ದರೆ ಸಾಕು

ಮನೆ ಮನ ಬೆಳಗಲು

ನಿನ್ನ ಕಣ್ಣ ಬೆಳಕು..!

******

ಒಂದಷ್ಟು ದೀಪ ಹಚ್ಚಲು

ಮೂಡಿತು ಬೆಳಕು

ಮನೆಯ ಸುತ್ತಲೂ

ಆಗೊಮ್ಮೆ ಕಣ್ಣು ಮುಚ್ಚಲು

ಎಲ್ಲೆಲ್ಲೂ ಕತ್ತಲು !

ಅರಿವಾಯಿತು ಸತ್ಯ

ಮನೆಯಲಿದ್ದರಷ್ಟೆ ಸಾಲದು ಬೆಳಕು

ನಮ್ಮ ಮನದಲ್ಲಿರಬೇಕು !

*****

ಬೇರೊಬ್ಬರ ಒಳಿತನ್ನು ಕಂಡು  

ಉರಿಯುವ ಬದಲು

ಕತ್ತಲಲ್ಲಿದ್ದವರ ಬದುಕಲ್ಲಿ

ಮೊದಲು

ನಮ್ಮಿಂದ ಒಂದಿಷ್ಟು 

ಬೆಳಕಾದರೆ ಅಷ್ಟೇ ಸಾಕು..!

******

ಎಲ್ಲಿಂದಲೋ ದೂರದಿಂದ

ಆ ಸೂರ್ಯ ಚಂದ್ರ

ಪ್ರತಿಫಲವಿಲ್ಲದೆ 

ನೀಡುವರು ಭೂಮಿಗೆ ಬೆಳಕು

ಇಲ್ಲಿ ನಮ್ಮೊಡನಿದ್ದವರೇ 

ಕಾಯುವರು ಕತ್ತಲಾಗಲು

ನಮ್ಮ ಬದುಕು.

*******

ಉರಿವ ಬೆಂಕಿಯಲ್ಲಿ

ಚಳಿಯ ಕಾಯಿಸುವರು

ಬೇಳೆ ಬೇಯಿಸುವರು ಕೆಲವರು

ಹಚ್ಚಿ ದ್ವೇಷ ಸಂಶಯದ ಕಿಡಿ

ಕಿಚ್ಚು ಹೆಚ್ಚುವ ಬದಲಿಗೆ

ಬೆಳಕಾಗಲಿ ಕತ್ತಲಲ್ಲಿ

ಒಂದು ಹಣತೆ ಹಚ್ಚಿ ಬಿಡಿ.

*****

ಬೆಳಕಿನ ಕವಿತೆಗಳು

 

ಒಡಲಲ್ಲಿ ಬಚ್ಚಿಟ್ಟ ದಾರ

ನನ್ನನ್ನೇ ಸುಟ್ಟಿದ್ದು ಏನಕ್ಕೆ?

ಕೊನೆಗೂ ಸತ್ಯ ತಿಳಿಯಲಿಲ್ಲ 

ಕರಗಿ ನೀರಾಗಿ ಬಿದ್ದಿದ್ದ ಮೇಣಕ್ಕೆ !

****

ತಾನು ಹೊತ್ತಿ ಉರಿದು

ಬೆಳಕನಿತ್ತರೂ ಊರಿಗೆಲ್ಲ

ದಾರಿ ತೋರುವರಿಲ್ಲ ದೀಪಕ್ಕೆ

ಕಾಲಬುಡದಲ್ಲೇ ಕತ್ತಲು

ಯಾವ ಪಾಪಕ್ಕೆ.?

****

 ಗೆಳತಿ ನೀ ಬಂದೆ ಬಾಳಲ್ಲಿ

ಮೂಡಿತ್ತು ಹೊಸ ಮಿಂಚು

ಬೆಳಕಾಗುವಷ್ಟರಲ್ಲಿ ಬರಸಿಡಿಲು 

ಬದುಕು ಸುಟ್ಟು ಕರಕಲು

ತಿಳಿಯಲಿಲ್ಲ ನಿನ್ನ ಸಂಚು..

****

ನೂರು ದೀಪದ ಬೆಳಕ ಕಂಡೆ

ಪ್ರಿಯೆ ನಿನ್ನ ಕಣ್ಣ ನೋಟದಲ್ಲಿ

ಹಚ್ಚಬೇಕಿಲ್ಲ ಈಗ ಹೆಚ್ಚು ಹಣತೆ 

ನಿತ್ಯ ದೀಪಾವಳಿ  ನನಗೆ ನೀನಿದ್ದಲ್ಲಿ !

****

ಬದುಕನ್ನೇ

ಸುಡಬಹುದು ಇಡೀ

ಬೆಳಕಾಗಬೇಕಿದ್ದ

ಒಂದು ಸಣ್ಣ ಕಿಡಿ

ಬತ್ತಿಯಿಡುವ ಮುನ್ನ

ಮಾತು ನೆನಪಿನಲ್ಲಿಡಿ !!

****

ಮಂಗಳವಾರ, ಜುಲೈ 5, 2022

ಕವನ

 ಮಳೆ ಮತ್ತು ನಾನು


ಆಫೀಸಿನ ಕಿಟಕಿಯಿಂದ 

ನೋಡಿದರೆ ಹೊರಗೆ

ಋತುವಿನ ಮೊದಲ ಮಳೆಗೆ

ಕಪ್ಪಡರಿದ ಮೋಡದ 

ಮಿಂಚಿನ ನಡುವೆ

ಸಾಗಿ ಬರುತ್ತಿತ್ತು ಹನಿಗಳ ಮೆರವಣಿಗೆ


ಹುಡುಗನೊಬ್ಬ ಓಡಿದ 

ನನ್ನನ್ನು ದಾಟಿ

ಆಟವಾಡಲು ಮಳೆಯಲ್ಲಿ ನೆನೆದು

ತಡೆಯಿತು ನನ್ನ ವಯಸ್ಸು ಹಿರಿತನ 

ಅವನ ಕೈಯನ್ನು ಹಿಡಿದೆಳೆದು


ಮಳೆ ಹಾಗೂ ನಾನು 

ಇಬ್ಬರ ನಡುವೆ

ಒಂದು ರೀತಿಯ 

ಗೋಡೆ ಅಡ್ಡವಾಗಿದೆ

ನನ್ನ ಬಾಲ್ಯದ ಮಳೆಯೂ 

ಬೆಳೆದು ದೊಡ್ಡದಾಗಿದೆ.


ಒಂದೊಂದು ಮಳೆಹನಿ ಬಂದು

ಗಾಜಿನ ಕಿಟಕಿಗೆ ಪಟಪಟನೆ ಬಡಿಯುತ್ತಿತ್ತು..

ನಾವಿಬ್ಬರೂ ಜೊತೆ ಸೇರಿ ಆಡುತ್ತಿದ್ದೆವು

ಬಹುಶಃ ಅದಕ್ಕಾಗಿ 

ಈಗ ನನ್ನ ಕರೆಯುತ್ತಿತ್ತು

ನಾವು ಸಣ್ಣವರಿದ್ದೆವು 

ಮಾತು ದೊಡ್ಡದಾಗಿರುತ್ತಿತ್ತು

ಈಗಿನಂತೆ ಬೇಗ ಮನೆ ಸೇರುವ 

ತುರ್ತು ಯಾರಿಗಿತ್ತು?

 

ಬಾನಂಚಲಿ ಹೊಳೆವ ಮಿಂಚು 

ಕಾಣಲು ಕಣ್ಣು ತವಕಿಸುತಿತ್ತು

ಈಗ ಯಾಕೋ ಭಯ ತರಿಸುತ್ತಿತ್ತು

ಮಳೆಯೆಂದರೆ ಒಂಥರಾ ಹಾಯೆನಿಸುತಿತ್ತು

ಈಗ ಒಮ್ಮೆ ನಿಂತರೆ ಸಾಕೆನಿಸುತ್ತಿತ್ತು


ತುಂಬಿದೆ ಅದರಲ್ಲಿ ಸುತ್ತಲಿನ ಕೊಚ್ಚೆ ಕೆಸರು..

ಮುಟ್ಟಿದರೆ ಕೆಟ್ಟ ಹೆಸರು..

ದೂರ ಸರಿದು ನಿಲ್ಲುವ ಹಾಗಿದೆ..

ನನ್ನ ಬಾಲ್ಯದ ಮಳೆಯೂ 

ಬೆಳೆದು ದೊಡ್ಡದಾಗಿದೆ


ಕುಣಿದು ಕುಪ್ಪಳಿಸುತಿದ್ದ ನೀರಲ್ಲಿ

ಈಗ ಕ್ರಿಮಿ ಕೀಟಗಳೇ ಕಾಣುತ್ತಿವೆ

ನನ್ನ ಬಗ್ಗೆಯಾದರೂ ಚಿಂತೆಯಿಲ್ಲ, 

ಲ್ಯಾಪ್‌ಟಾಪ್ ಒದ್ದೆಯಾಗುವ 

ಭಯ ಕಾಡುತ್ತಿದೆ.


ಮಳೆಯೆಂದರೆ ಬಿಸಿ ಬಿಸಿ ಚಹಾ 

ತಿಂಡಿಯ ಘಮದೊಂದಿಗೆ 

ಉಲ್ಲಾಸ ಉತ್ಸಾಹವಿರುತ್ತಿತ್ತು

ಒಂದಷ್ಟು ನೆನಪುಗಳ ಕೊಟ್ಟು

ಮರಳಿ ಸಾಗುತ್ತಿತ್ತು..


ಬೆಳೆಯುತ್ತ  ಹೋದಂತೆ ಆ ಕ್ಷಣಗಳು 

ನಮ್ಮ ನಡುವೆ ಎಲ್ಲೋ 

ಕಳೆದು ಹೋಗಿದೆ

ನನ್ನ ಬಾಲ್ಯದ ಮಳೆಯೂ 

ಬೆಳೆದು ದೊಡ್ಡದಾಗಿದೆ..!!


ಮಂಗಳವಾರ, ಮೇ 26, 2020

ಲಾಕ್ ಡೌನ್ ಕವಿತೆಗಳು-2

ಸತ್ತು ಮಲಗಿದೆ
ನಿರ್ಜೀವ ರಸ್ತೆ
ಅಲ್ಲಿ ಗಿಜಿಗುಡುವ ಸದ್ದಿಲ್ಲ!
ನೆನಪಿಸಿದಂತಿದೆ..
ಹೊರಬರಬೇಡಿ ಯಾರೂ
ರೋಗಕ್ಕೆ ಮದ್ದಿಲ್ಲ!!
****
ಲೋಕದ ಭಾರ 
ತಮ್ಮದೇ ತಲೆಯ 
ಮೇಲೆ ಹೊತ್ತಂತೆ
ನಮ್ಮಿಂದಲೇ ದಿನ ಬೆಳಗು
ಎಂಬಂತೆ 
ತಿರುಗುತ್ತಿದ್ದವರಿಗೆ ಈಗ  
ತಿಂದುಂಡು ಹೊರಳಾಡಿ
ದಿನ ಕಳೆಯುವುದು 
ಹೇಗೆಂಬ  ಚಿಂತೆ !!
****
ಕಂಡಾಗ ಅನಿಸಿದ್ದು ..
ಯಾವಾಗಲೂ
ಮಾನವೀಯತೆಯೇ
ಮಿಗಿಲು
ನಮ್ಮ ಹೊಟ್ಟೆ 
ಕೂಡಾ ತುಂಬುವುದು
ಇನ್ನೊಬ್ಬರ ಹಸಿವು ನೀಗಲು
****
ಎಲ್ಲ ಕಾಲಕ್ಕೆ
ಅನಿವಾರ್ಯವಲ್ಲ
ಕೂಡಿಟ್ಟ ಗಳಿಕೆ ಸಂಪತ್ತು
ನಿಜವಾದ 
ನೆಮ್ಮದಿಯ ಗುಟ್ಟು 
ಒಂದಿಷ್ಟು ಪುರುಸೊತ್ತು 
ಮತ್ತು
ನಮ್ಮವರೊಡನೆ ಕಳೆದ ಹೊತ್ತು
****
ದೂರ ತೀರ ಸೆಳೆತಕೆ
ಮಾರು ಹೋಗಿ
ನಮ್ಮತನವ ಮಾರಿ,
ಮರಳಿ ಬರುವಾಗ
ಬಿಟ್ಟಿ ಬಂದಿದ್ದು ಈ ಮಾರಿ..!!
****
ಮೊದಲು ಎಲ್ಲೆಡೆ
ಮಲಿನವಾಗಿತ್ತು
ಮೂಗು ಮುಚ್ಚಿಕೊಳ್ಳಬೇಕಿತ್ತು
ಆದರೆ 
ಈಗ ಸುತ್ತ ಸ್ವಚ್ಛವಾಗಿದೆ
ಮನುಷ್ಯ
ಮುಖ ತೋರಿಸದಂತಾಗಿದೆ!!
****

ಸೋಮವಾರ, ಮೇ 25, 2020

ಲಾಕ್ ಡೌನ್ ಕವಿತೆಗಳು


ಇಷ್ಟು ದಿನ ಕಂಡು ಕೇಳದ 
ಮುಗ್ಧ ಜೀವಿಗಳ ಆಕ್ರಂದನ
ಇಂದು ತಟ್ಟಿದೆ,
ಹಾಕಿಕೊಂಡಿದ್ದಾನೆ  ಮನುಜ 
ತಾನೇ ಸುತ್ತಲೂ ದಿಗ್ಬಂಧನ
****
ಈ ಭೂಮಿಗೊಬ್ಬನೇ ಒಡೆಯ 
ಅಂದುಕೊಂಡಿದ್ದು ಸುಳ್ಳು  
ಸದ್ಯ ಕಂಡಾಗ ಅನಿಸಿದ್ದು
ಬದುಕುವ ಹಕ್ಕಿದೆ 
ಎಲ್ಲ ಜೀವರಾಶಿಗೆ ಇಲ್ಲೂ
***
ಹೊರಗೆ ಹೊರಟಾಗ ಕಂಡಿದ್ದು 
ದೌಲತ್ತು ಸಂಪತ್ತು 
ಕುರುಡು ಕಾಂಚಾಣ ಒಂದೇ
ಬರುವಾಗ ಸಾವನ್ನೂ ಕಟ್ಟಿ
ಕೊಂಡಿದ್ದು ಬೆನ್ನ ಹಿಂದೆ
***
ಎಷ್ಟೊಂದು ಹಿಂಸೆ ಯಾತನೆ
ಏಕಾಂತ ಒಂಟಿತನದ ಬದುಕು
ಹೆಜ್ಜೆಯಿಟ್ಟರೆ ಸಾಕು 
ಹಿಂಬಾಲಿಸುತ್ತಿದೆ ಸಾವು
ಕಾಲಿನ ಬುಡಕೂ..
***
ನಮ್ಮವರೇ ಇಂದು 
ಕಂಡಾಗ ಸರಿವರು 
ಮಾರು ದೂರ 
ಎಲ್ಲರಿಗೂ ಬೇಕು ಅಂತರ
ಹೇಗಿದೆ ನೋಡಿ...!?
ಸೃಷ್ಟಿಯ ಮುಂದೆ
ಎಲ್ಲರೊಂದೆ 
ಅಸ್ಪ್ರಶ್ಯರು ಒಂಥರಾ...!!


ಶುಕ್ರವಾರ, ಜುಲೈ 18, 2014

ಮತ್ತೆ ಮೂರು ಹನಿಗಳು......

ನಮ್ಮ ಮನೆಯ
ವಾತಾವರಣವೇ ಹೀಗೆ..
ಬದಲಾಗುವುದು ಆಗಾಗ
ಖುಷಿಯಲಿದ್ದರೆ ನನ್ನಾಕೆ
ಮನೆ ತುಂಬಾ ಮಧುರ ರಸರಾಗ
ಮುನಿಸಿಕೊಂಡರೆ
ಮಾತಿಲ್ಲ ಕಥೆಯಿಲ್ಲ ಬಾಯಿಗೆ ಬೀಗ
ಅತ್ತರೆ ಕಣ್ಣೀರೇ ಸಾಕು
ಅಲ್ಲಿ ಧುಮ್ಮಿಕ್ಕುವ ಜೋಗ...:)

     ***********

ಇತ್ತೀಚೆಗೆ ರಾಜ್ಯದಲ್ಲಿ
ಮಹಿಳೆಯರ ಮೇಲೆ
ದೌರ್ಜನ್ಯ ಅತ್ಯಾಚಾರಗಳದೇ
ಸುದ್ದಿ ಅಲ್ಲಲ್ಲಿ..
ಇಂತಹವರನ್ನು ಸಾಯಿಸಬೇಕು
ಕಂಡ ಕಂಡಲ್ಲಿ ಹೊಡೆದು
ಕಲ್ಲಲ್ಲಿ...!

    ***********

ಕಣ್ಣೀರು ಸುರಿಸುತ್ತಿರುವೆನೆಂದು
ಭಾವಿಸದಿರು
ನಿನ್ನನ್ನೇ ನೆನೆದು
ಕೊಡೆ ಮರೆತು ಹೋದ ತಪ್ಪಿಗೆ
ಏನು ಹೇಳಲಿ......
ಮೂಗು ಕಟ್ಟಿದೆ ಗೆಳತಿ
ಮೊನ್ನೆ
ಮಳೆಯಲ್ಲಿ ನೆನೆದು..:)


   ************

ಶನಿವಾರ, ನವೆಂಬರ್ 24, 2012

ಕೊಲೆಗಾರ !!


(ಅನುವಾದಿತ ಕಥೆ)  
ಇಂಗ್ಲೀಷ್ ಮೂಲ:ರವಿ ಲೋಬೊ
                                          ಕೊಲೆಗಾರ !!
ವೇಗವಾಗಿ ಚಲಿಸುತ್ತಿದ್ದ ಆ ಕಾರಿಗೆ ಮಹಿಳೆಯೊಬ್ಬಳು ಕೈ ಚಾಚುತ್ತಿದ್ದುದನ್ನು ಕಂಡ ಆತ ಕಾರನ್ನು ನಿಧಾನಗೊಳಿಸಿದ.ಆಕೆ ಬಹುತೇಕ ರಸ್ತೆ ಮಧ್ಯೆ ಬಂದು ನಿಂತಿದ್ದಳು.ಚಿಕ್ಕ ಕಪ್ಪು ಸ್ಕರ್ಟ್ ಬಿಳಿ ಟಾಪ್ ಧರಿಸಿದ್ದ ಅವಳು, ಅದು ಕತ್ತಲಾದುದರಿಂದ ಕಾರಿನ ಹೆಡ್ ಲೈಟಿನ ಬೆಳಕಿನಿಂದ ತಪ್ಪಿಸಲೆಂದೇನೋ ಸನ್ ಗ್ಲಾಸ್ ಧರಿಸಿದ್ದಳು.
ಕಾರು ನಿಂತಿತು.
ಆಕೆ ಬಾಗಿಲ ಬಳಿ ಬಂದು"ನನಗೆ ಈ ಸಿಟಿಯಲ್ಲಿ ಒಂದು ಸುತ್ತು ಡ್ರಾಪ್ ಕೊಡ್ತೀರಾ.. ಪ್ಲೀಸ್"?ನಯವಾಗಿ ಕೇಳಿದಳು. ಆತ ಮುಂದಿನ ಬಾಗಿಲು ತೆರೆದ.
"ನಾನು ಕಡೇ ಬಸ್ ಮಿಸ್ ಮಾಡ್ಕೊಂಡೆ .ಥ್ಯಾಂಕ್ ಗಾಡ್ ! ಪುಣ್ಯಕ್ಕೆ ನೀನು ಈ ದಾರಿಯಲ್ಲಿ ಬಂದೆ, ನಾನು ಬಹಳ ಹೊತ್ತಿನಿಂದ ಕಾಯುತ್ತಿದ್ದೆ."ಆಕೆ ಸನ್ ಗ್ಲಾಸ್ ತೆಗೆದು ಕವರಿನಲ್ಲಿ ಜೋಪಾನವಾಗಿಡುತ್ತಾ ಹೇಳಿದಳು .
"ಹೌದು ಈ ಕಾಡಿನ ಪ್ರದೇಶದಲ್ಲಿ ತುಸು ಬೇಗನೇ ಕತ್ತಲಾಗಿಬಿಡುತ್ತೆ"ಆತ ಅಂದ.
"ತುಂಬಾ ಚಳಿಯಿದೆ ಹೊರಗಡೆ," ಆಕೆ ಅಂಗೈ ಉಜ್ಜುತ್ತಾ ಹೇಳಿದಳು.
ಕಾರು ಈಗ ವೇಗ ಪಡೆಯುತ್ತಿತ್ತು.
"ಅಪರಿಚಿತರ ಜೊತೆ ಈ ತರಹ ತಡ ರಾತ್ರಿ ಡ್ರಾಪ್ ಕೇಳಲು ಭಯವಾಗುವುದಿಲ್ಲವೇ.ಅಪರಾತ್ರಿಯಲ್ಲಿ ಕೆಲವು ನಿಗೂಢ ಘಟನೆಗಳು ಈ ದಾರಿಯಲ್ಲಿ ನಡೆಯುತ್ತಿರುತ್ತವೆ ಅದಕ್ಕಂದೆ."ಆತ ಪ್ರಶ್ನಿಸಿದ
"ನಿಜವಾಗಿಯೂ! ನಾನೂ ಭಯಗೊಂಡಿದ್ದೆ, ಈ ಕಾಡಿನಲ್ಲಿ ಹೀಗೆ ಇಡೀ ರಾತ್ರಿ ಕಳೆಯುವುದನ್ನು ನನ್ನಿಂದ ಊಹಿಸಲೂ ಕೂಡಾ ಸಾಧ್ಯವಾಗುತ್ತಿಲ್ಲ.ನಿನ್ನ ಕಾರಿನ ಬೆಳಕು ಕಂಡಾಗಲೇ ,ಈ ಅವಕಾಶ ಮಿಸ್ ಮಾಡ್ಕೋ ಬಾರದು ಅಂತ ನಿರ್ಧರಿಸಿದೆ..,ನಾನು ಬಸ್ ಮಿಸ್ ಮಾಡ್ಕೊಂಡಿದ್ದು, ನೀನು ಈ ದಾರಿಯಲ್ಲಿ ಬಂದಿದ್ದು…ಏನೋ ಅಂತಾರಲ್ಲ ಕಟುಕನ ಕೈಗೆ….ಇದೊಂಥರಾ ಕಾಕತಾಳೀಯ.."
ಕಾರಿನ ಡಾಶ್ ಬೋರ್ಡಿನ ಮೀಟರ್ ಲೈಟ್, ಹಾಗೂ ಹೆಡ್ ಲೈಟಿನ ಹೊರತು ಎಲ್ಲೆಡೆ ಕತ್ತಲಾವರಿಸಿತ್ತು. ಉದ್ದುದ್ದ ಮರಗಳು ರಸ್ತೆಯ ಒಂದು ಬದಿಗೆ ಒರಗಿ ನಿಂತಿದ್ದರೆ ಇನ್ನೊಂದೆಡೆ ಪ್ರಪಾತದಂತಿತ್ತು. ನೋಡು ನೋಡುತ್ತಿದ್ದಂತೆ ಕಾರು ನಗರದತ್ತ ಬಂದಿತ್ತು.ದೊಡ್ಡ ದೊಡ್ಡ ಬೀದಿದೀಪಗಳು ಆ ಕತ್ತಲೊಂದಿಗೆ ಇನ್ನೂ ಹೋರಾಡುತ್ತಿದ್ದವು.
"ನಾನಿಲ್ಲೇ ಇಳಿದು ಬಿಡುತ್ತೇನೆ" ಅಂದಳು ಆಕೆ.
ಕಾರು ರಸ್ತೆ ಬದಿಯಲ್ಲಿ ಬಂದು ನಿಂತಿತು.
ಆಕೆ ಆತನಿಗೊಂದು ಥ್ಯಾಂಕ್ಸ್ ಹೇಳಿ ಡೋರ್ ತೆರೆಯಲು ಪ್ರಯತ್ನಿಸಿದಳು."ಯಾವಾಗಲೂ ಹೀಗೆ.. ನನಗೆ ಬಾಗಿಲು ತೆರೆಯಲಾಗುವುದೇ ಇಲ್ಲ.ಅವು ನನ್ನ ತಬ್ಬಿಬ್ಬು ಮಾಡಿಬಿಡುತ್ತವೆ".ಅನ್ನುತ್ತಾ ಮತ್ತೆ ಯತ್ನಿಸಿದಳು.
"ಅದು ಲಾಕ್ ಆಗಿಬಿಟ್ಟಿದೆ" ಎಂದ ಆತ
"ನನಗೋಸ್ಕರ ಸ್ವಲ್ಪ ತೆರೀತೀರಾ…"
ಆತ ಪ್ರತಿಕ್ರಿಯಿಸಲಿಲ್ಲ,
ಸ್ವಲ್ಪ ಹೊತ್ತಿನ ಬಳಿಕ ಉತ್ತರಿಸಿದ, "ಕೆಲವೊಮ್ಮೆ ಅಚ್ಚರಿಗಳು ನಡೆದು ಬಿಡುತ್ತವೆ. ನೀನು ಬಸ್ ಮಿಸ್ ಮಾಡ್ಕೊಂಡಿದ್ದು ನಾನು ಈ ದಾರಿಯಲ್ಲಿ ಬಂದಿದ್ದು…ಏನೋ ಅಂತಾರಲ್ಲ...ನೀನೇ ಈಗ ಅಂದಂತೆ ಕಟುಕನ ಕೈಗೆ…....ಹೌದು ನಾನೊಬ್ಬ ಕೊಲೆಗಡುಕ"
ಆಕೆ ವಿಷಣ್ಣ ನಗೆ ನಕ್ಕಳು.
"ನಾನೇನು ಟಿ ವಿ ಯೊಳಗಿದ್ದೇನೆಯೇ,..ಅಥವಾ ಕ್ಯಾಮರ ಮುಂದೆ ನಿಂತಿದ್ದೇನಾ..ಇಂತಹ ಡೈಲಾಗ್ ಕೇಳಲು",
ಆತ ಕಪಾಳಕ್ಕೊಂದು ಬಾರಿಸಿದ.ಆ ರಭಸಕ್ಕೆ ಆಕೆಯ ತಲೆ ಬಾಗಿಲಿಗೆ ಬಡಿದಿತ್ತು.ಕಣ್ಣುಗಳು ನೋವಿನಿಂದ ನೀರು ತುಂಬಿಕೊಂಡು ಕೆಂಪಗಾಗಿದ್ದುವು.
"ನನ್ನ ಮಾತನ್ನು ಗಮನವಿಟ್ಟು ಕೇಳು, ಜಾಸ್ತಿ ಮಾತಡಬೇಡ. ಸುಮ್ನೆ ಇದ್ರೆ ಒಳ್ಳೆಯದು..ಯಾವುದೇ ಹುಚ್ಚು ಪ್ರಯತ್ನ ಪಟ್ಟರೆ, ಏನಾದ್ರೂ ಚಾಲಾಕಿ ತೋರಿಸಿದ್ರೆ ನಿನ್ನನ್ನು ಉಳಿಸಲ್ಲ ಅಷ್ಟೇ.. "
ಈಗ ಕಾರು ಯೂ ಟರ್ನ್ ಪಡೆದು,ಕಾಡಿನ ಒಂದು ಒಂಟಿ ರಸ್ತೆ ನಡುವೆ ವೇಗವಾಗಿ ಸಾಗುತ್ತಿತ್ತು. ಆಕೆ ಈಗ ಸಾವರಿಸಿಕೊಂಡು ಕರ್ಚೀಫಿನಿಂದ ಮೂಗೊರೆಸಿಕೊಂಡಳು.
"ಪ್ಲೀಸ್ ..ನನ್ನ ಕೊಲ್ಬೇಡ .."
ಆತ ಏನೂ ಪ್ರತಿಕ್ರಿಯಿಸಲಿಲ್ಲ….
ಆತ ಸುಂದರ ಸುಧೃಢ ಯುವಕನಾಗಿದ್ದ,.ಆತ ಕೈಗೆ ಕಪ್ಪು ಗ್ಲೌಸ್ ಹಾಕಿದ್ದನ್ನು ಆಕೆ ಗಮನಿಸಿದಳು.ಇಂತಹ ಸಂದರ್ಭದಲ್ಲಿ ಸುಮ್ಮನಿದ್ದರೆ ಪ್ರಯೋಜನವಿಲ್ಲ ಎಂದುಕೊಂಡಳು.ಕೂಗಿ ಅರಚೋಣವೆಂದರೆ ಯಾರೊಬ್ಬರೂ ಕಾಣುತ್ತಿರಲಿಲ್ಲ.. ಆಕೆಗೆ ಏನೋ ಹೊಳೆದಂತಾಗಿ...
"ನಿನಗೆಷ್ಟು ಹಣ ಬೇಕು…ಹೇಳು "
ಮೌನ ಮುಂದುವರಿದಿತ್ತು..
"ನನ್ನನ್ನು ಬಿಟ್ಟು ಬಿಡು, ಯಾರ ಬಳಿಯೂ ಹೇಳಲ್ಲ, ನಾನು ನೀನು ಭೇಟಿಯಾಗದವರ ರೀತಿ ಇದ್ದು ಬಿಡುತ್ತೇನೆ.ನಾನು ಯಾವುದಕ್ಕೂ ಸಿಧ್ಧ..ಅಸಹಾಯಕತೆಯ ನಡುವೆ ಹೇಳಿದಳು.
ಆತನ ತೊಡೆಯ ಮೇಲೆ ಕೈಯಿಡುತ್ತಾ, ಮೆಲ್ಲಗೆ ತಟ್ಟುತ್ತಾ "ನಿನಗಿದು ಇಷ್ಟಾನಾ…"?? ಕೇಳಿದಳು
"ತೆಗೀ ಕೈನಾ.,ಇಲ್ಲಾಂದ್ರೆ ಇನ್ನೊಂದು ಬಾರಿಸ್ತೀನಿ.."
ತಕ್ಷಣ ಕೈ ಹಿಂತೆಗೆದು ಕೊಂಡಳು
ಕಾರು ಬೆಟ್ಟದ ರಸ್ತೆಯ ನಡುವೆ ಹಾವಿನಂತೆ ಚಲಿಸುತ್ತಿತ್ತು.
"ಈ ಪ್ರಪಂಚದಲ್ಲಿ ಸುಖಕ್ಕಾಗಿ ಸೆಕ್ಸ್ ಗಿಂತಲೂ ಬೇಕಾದಷ್ಟು ವಿಷಯಗಳಿವೆ.ಯೋಚನೆ ಮಾಡು....ಈ ಮನುಷ್ಯರು ಯಾಕೆ ಕೊಲೆ ಮಾಡುತ್ತಾರೆ"??
ಆಕೆ ಪ್ರತಿಕ್ರಿಯಿಸಲಿಲ್ಲ.ಆದರೆ ಪ್ರಶ್ನೆ ಮರುಕಳಿಸಿದಾಗ ಆಕೆಗೆ ಏನೂ ತೋಚಲಿಲ್ಲ.ಆತ ಇನ್ನೊಮ್ಮೆ ಕಪಾಳಕ್ಕೆ ಬಾರಿಸಿದ್ದ.
"ನೀನು ಯೋಚಿಸಿಲ್ಲ ಉತ್ತರಿಸಿಲ್ಲವೆಂದರೆ ನಿನಗೆ ನನ್ನ ಬಗ್ಗೆ ಆಸಕ್ತಿಯಿಲ್ಲವೆಂದಾಯ್ತು, ಮತ್ತು ನಾನು ನಿನ್ನಲ್ಲಿ ಆಸಕ್ತಿ ಕಳೆದುಕೊಂಡ್ರೆ, ನನ್ನಲ್ಲಿ ನಿನಗೆ ಯಾವುದೇ ಬೆಲೆಯಿಲ್ಲ.ನಾನೀಗ ನಿನ್ನ ಕೊಂದು ಆ ಪ್ರಪಾತಕ್ಕೆಸೆಯಬಹುದು.
ಆಕೆ ಭಯಗೊಂಡಳು, "ಪ್ಲೀಸ್…"ಬೇಡತೊಡಗಿದಳು
"ಹಾಗಾದ್ರೆ ಹೇಳು…ಯಾಕೆ ಕೊಲೆ ಮಾಡ್ತಾರೆ"??
ಆಕೆ ಸ್ವಲ್ಪ ಸಮಯದ ಬಳಿಕ, "ಪ್ರತೀಕಾರಕ್ಕಾಗಿ" ಅಂದಳು
"ಆಮೇಲೆ.."?
"ಮತ್ಸರ, ಜಗಳ, ಕೋಮು ಗಲಭೆ,ಹಣ, ಹೆಣ್ಣು, ಆಸ್ತಿ….".
ನೀನೇನು ಟೀಚರಾ..???
"ಹೌದು "…
"ನೀವು ಹೀಗೇನೆ…ನಿಮ್ಮ ಬಳಿ ಎಲ್ಲದಕ್ಕೂ ಉತ್ತರವಿರುತ್ತೆ. ಆದ್ರೆ ಇದು ಬಹುಶಃ ತಪ್ಪಾಗಿರಬಹುದು, ಯಾರಾದ್ರೂ ಪ್ರಶ್ನೆ ಕೇಳಿದ್ರೂ ಸಾಕು ನೀವು ಪುಸ್ತಕದ ರೆಡಿಮೇಡ್ ಉತ್ತರದೊಂದಿಗೆ ರೆಡಿಯಾಗಿರ್ತೀರಾ.".
ಅಷ್ಟರಲ್ಲಿ ಯಾವುದೋ ಸಣ್ಣ ಪ್ರಾಣಿ, ತೋಳ ವೆನಿಸುತ್ತೆ ರಸ್ತೆ ಮಧ್ಯೆ ಬರಲು ಪ್ರಯತ್ನಿಸಿ, ಕಾರಿನ ಹೆಡ್ ಲೈಟಿನ ಬೆಳಕಿಗೆ ದಿಕ್ಕು ತೋಚದಂತಾಗಿ ಕೊನೆ ಕ್ಷಣದಲ್ಲಿ ತಪ್ಪಿಸಿಕೊಂಡು ಹೋಯ್ತು..
"ನೀನು ಯೋಚನೆ ಮಾಡುತ್ತಿಲ್ಲ, ಹೋಗ್ಲಿ ಬಿಡು ಮನುಷ್ಯನ ಯಾವ ನಡವಳಿಕೆ ಮತ್ತೆ ಮತ್ತೆ ಕೊಲೆ ಮಾಡಿಸುತ್ತೆ??? ಆತ ಕೇಳಿದ
"ಹಣ "ಉತ್ತರಿಸಿದಳು ಆಕೆ
"ಅದಕ್ಕೆ ಹಲವಾರು ಸುಲಭ ದಾರಿಗಳಿವೆ. ಕೊಲೆ ಮಾಡುವ ಅಗತ್ಯವಿಲ್ಲ "
"ಬೇರೆ ಕಾರಣ ಗೊತ್ತಿಲ್ಲ…"ನರ್ವಸ್ ಆಗಿ ಹೇಳಿದಳು
"ಸಂತೋಷಕ್ಕಾಗಿ…..ನೀನು ಏನಂತೀ"…???
"ಏನಂದೆ.."..? ಆಕೆ ಪ್ರಶ್ನಿಸಿದಳು
"ಸಂತೋಷಕ್ಕಾಗಿ ಕೊಲೆ ಮಾಡಬಹುದಾ…"? ಮರು ಪ್ರಶ್ನಿಸಿದ
"ಇಲ್ಲ .. "
"ಪರಸ್ಪರರ ನಡುವಿನ ವ್ಯತ್ಯಾಸಕ್ಕಾಗಿ .."??
"ವ್ಯತ್ಯಾಸಕ್ಕಾಗಿ …"????
"ಹೌದು , ಭಾವನೆಗಳೇ ಇಲ್ಲದ ಮನುಷ್ಯ ಮಾತ್ರ ಕೊಲೆ ಮಾಡುತ್ತಾನೆ. ಆತನಿಗೆ ಅದೊಂದು ದಿನ ನಿತ್ಯದ ಚಟುವಟಿಕೆ.ಟೀ ಕುಡಿದಂತೆ ಅಥವಾ ಬ್ಯಾಂಕಿನಿಂದ ಚೆಕ್ ಬುಕ್ ಆರ್ಡರ್ ಮಾಡಿದಂತೆ.."
ಅದು ಹೇಗೆ ಸಾಧ್ಯ…??
ನೀನು ಸಸ್ಯಾಹಾರಿ ನಾ..? ಕೇಳಿದ ಆತ
ಏನು….?
ನೀನು ಚಿಕನ್ ತಿನ್ನುತ್ತೀಯಾ?ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವಾಗ ಒಮ್ಮೆಯಾದ್ರೂ ಯೋಚಿಸಿದ್ದೀಯಾ. ನೀನು ಮಾಡೋದು ಸರೀನಾ ಅಂತ..?.?
ಕಾರಣ ಸಿಗದೆ ಆಕೆ ಮಾತನಾಡದಾದಳು.
"ಇನ್ನು ಕೆಲವರು ವಿಚಿತ್ರ ಕಾರಣಗಳಿಗಾಗಿ ಕೊಲೆ ಮಾಡ್ತಾರೆ. ನೀನು ಡೆವಿಲ್ ಫೋಟೋಗ್ರಾಫರ್ ಬಗ್ಗೆ ಕೇಳಿದ್ದೀಯಾ.."?
"ಇಲ್ಲ.."
"ದಶಕಗಳ ಹಿಂದೆ ಆತ ವರ್ಷಕ್ಕೆ 18 ಕೊಲೆ ಮಾಡಿದ್ದ.ಅದರಲ್ಲಿ ಬಹುತೇಕ ಎಲ್ಲರೂ ಗಂಡಸರೇ ಆಗಿದ್ದರು. ಅದು ಅನಗತ್ಯ ಬಿಡು…ಅದರ ಹೊರತಾಗಿ ಕೊಲೆಗಾರ ಅಪರಾಧ ಕೃತ್ಯಗಳ ಕೆಲವು ಚಿತ್ರಗಳನ್ನು ಅಲ್ಲಿ ಬಿಟ್ಟು ಹೋಗುತ್ತಿದ್ದ. ಕೊಲೆಯಾದ ನತದೃಷ್ಟರೂ ಅಮಾಯಕರೇನಲ್ಲ, ಹಲವಾರು ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರು.ಆತ ಕೆಲವು ದಿನಗಳವರೆಗೆ ಅವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದ. ಅವರ ಕೃತ್ಯಗಳ ಬಗ್ಗೆ ಚಿತ್ರ ಸಂಗ್ರಹಿಸುತ್ತಿದ್ದ, ಸಾಕ್ಷ್ಯಗಳೆಲ್ಲ ಸಿಕ್ಕ ಮೇಲೆಯೇ ಆತ ಕೊಲೆಮಾಡುತ್ತಿದ್ದ.ನಂತರ ಅಲ್ಲಿ ಆ ಚಿತ್ರಗಳನ್ನು ಬಿಟ್ಟು ಹೋಗುತ್ತಿದ್ದ. ಯಾರೊಬ್ಬರಿಗೂ ಅವನ ಹೆಸರು ಗೊತ್ತಿಲ್ಲ. ಆತ 'ಡೆವಿಲ್ ಫೋಟೊಗ್ರಾಫರ್' ಎಂದೇ ಪರಿಚಿತ.ಆತನನ್ನು ಎಲ್ಲರೂ'ಡೆವಿಲ್' ಎಂದೇ ಕರೆಯುತ್ತಿದ್ದರು.
"ಒಂದು ರೀತಿ ನೋಡಿದರೆ ಆತ ಶಿಕ್ಷೆ ನೀಡುವವನಂತೆ ಕಾಣುತ್ತಾನೆ".ಆಕೆ ಅಂದಳು.
"ಹೌದು ಆರಂಭಕ್ಕೆ ನಾನೂ ಅದೇ ರೀತಿ ಅಂದುಕೊಂಡಿದ್ದೆ. ಆದರೆ ಆತ ಯಾಕೆ ನಿಲ್ಲಿಸಿದ, ದಶಕಗಳಿಂದ ಯಾಕೆ ಮೌನವಾಗಿದ್ದಾನೆ ಎಂದೇ ತಿಳಿಯುತ್ತಿಲ್ಲ"
"ಏನು ಆಯಿತು ಅವನಿಗೆ."ಪ್ರಶ್ನಿಸಿದಳು
"ಆತ ತಣ್ಣಗಾದ, ನಾನು ಅವನ ಕೊಲೆಗಳ ಬಗ್ಗೆ ತಿಳಿಕೊಂಡಿದ್ದೇನೆ.ಆತ ಒಬ್ಬ ಕಲೆಗಾರ ಕೂಡಾ,ಆತ ಕೊಲೆ ಮಾಡುವ ಮುನ್ನ ಅವರ ಮನವೊಲಿಸುತ್ತಿದ್ದ.ಕೊಲೆಯಾಗುವ ಸಂದರ್ಭದಲ್ಲಿ ಯಾವುದೇ ಪ್ರಯತ್ನ ಪಟ್ಟ ಬಲತ್ಕಾರ ಪಟ್ಟ ಕುರುಹುಗಳಿರುವುದಿಲ್ಲ.ನತದೃಷ್ಟರು ಸುಲಭವಾಗಿ ಸಾವನ್ನು ಒಪ್ಪಿಕೊಳ್ಳುತ್ತಿದ್ದರು.ಆತ ಒಬ್ಬ ಪರ್ಫೆಕ್ಷನಿಸ್ಟ್. ಪೋಲೀಸರಿಗೂ ಹಿಡಿಯಲು ಸಾಧ್ಯವಿಲ್ಲ.ಆದರೆ ದೇವರೇ ಬಲ್ಲ,ಎಷ್ಟು ಕಾಲ ಹೀಗೆ ಇರಬಲ್ಲ..ಆದರೆ ಈ ಸಯನೈಡ್ ಕೊಲೆಗಳ ರೀತಿಯೇ ಬೇರೆ......"
"ಹೌದು ನಾನೂ ಕೂಡಾ ಈ ಬಗ್ಗೆ ಓದಿದ್ದೆ.ಸಯನೈಡ್ ಕೊಲೆ ಅಂದ್ರೆ ಆ ಕೊಲೆಗಾರ ಅಮಾಯಕ ಹುಡುಗಿಯರಿಗೆ ವರದಕ್ಷಿಣೆಯಿಲ್ಲದೆ ಮದುವೆಗೆ ಒಪ್ಪಿಸಿ, ಮನವೊಲಿಸಿ ದಂಪತಿಗಳಂತೆ ಲಾಡ್ಜ್ ಒಂದರಲ್ಲ್ಲಿ ರೂಂ ಮಾಡಿ ರಾತ್ರಿ ಕಳೆದು, ಮರುದಿನ ಆಕೆ ಗರ್ಭವತಿಯಾಗದಂತೆ ಮಾತ್ರೆ ತೆಗೆದುಕೊಳ್ಳಲು ಹೇಳುತ್ತಿದ್ದ.ಆ ಮಾತ್ರೆಯಲ್ಲಿ ಸಯನೈಡ್ ಇರುತ್ತಿತ್ತು"
"ಒಳ್ಳೆಯದು..ನಿನಗ್ಗೊತ್ತಾ ಆತ ಎಷ್ಟು ಕೊಲೆ ಮಾಡಿದ್ದಾನೆ.".?
"ಹತ್ತು ಅಥವಾ ಹದಿನೈದು ಇರಬಹುದು."
"ಪೋಲೀಸರು ಆರೆಸ್ಟ್ ಮಾಡಿದಾಗ ಹೇಳಿದ್ದ ೧೭ ಜನ, ಆದರೆ ವಾರದೊಳಗೆ ಅದು ೨೦ ಕ್ಕೇರಿತ್ತು. ಏನಾದ್ರೂ ಆಗಲಿ.., ನನಗೆ ಈ ಸಯನೈಡ್ ಕಿಲ್ಲರ್ ಬಗ್ಗೆ ಆಸಕ್ತಿಯಿಲ್ಲ.ಅವನಿಗೆ ಕೊಲೆ ಮಾಡುವ ರೀತಿಯೇ ಸರಿಯಿಲ್ಲ.ಆತನಿಗೆ ಬೇಕಾಗಿದ್ದು ಕೇವಲ ಹಣ ಮತ್ತು ಸೆಕ್ಸ್.ಆತನದು ಅದೇ ಸೂತ್ರ.ಪೋಲೀಸರು ಹಿಡಿಯುವವರಗೂ ಅಲ್ಲೇ ಸುತ್ತುತ್ತಿದ್ದ, ಈಗ ಇಂಟರೆಸ್ಟಿಂಗ್ ಭಾಗಕ್ಕೆ ಬರೋಣ..."ಆತ ಅಂದ
ಆಕೆ ದಿಟ್ಟಿಸಿ ನೋಡುತ್ತಿದ್ದಳು...
"ಇತ್ತೀಚೆಗೆ ಕಳೆದ ತಿಂಗಳಲ್ಲಿ ಮೂರು ಕೊಲೆಗಳು ನಡೆದವು. ಆ ಮೂರೂ ಕೊಲೆಗಳ ಭಾವಚಿತ್ರಗಳಿವೆ.
"ಡೆವಿಲ್ ಮತ್ತೆ ಬಂದಿರಬೇಕು".ಆಕೆ ಎದೆಬಡಿತ ಜೋರಾಗಿತ್ತು.
"ಹೌದು ದಶಕಗಳ ನಂತರ, ನಿನಗ್ಗೊತ್ತ ಇಲ್ಲಿ ಏನಾಗುತ್ತಿದೆ ಅಂತ.."?
"ಇಲ್ಲ "
"ಸ್ಥಾನಕ್ಕಾಗಿ ಪೈಪೋಟಿ ಅಷ್ಟೇ,ನಾನು ಡೆವಿಲ್ ಬಗ್ಗೆ ಅರ್ಥಮಾಡಿಕೊಂಡೆ,ಹತ್ತು ವರ್ಷಗಳಲ್ಲಿ ಆತ 18 ಕೊಲೆ ಮಾಡಿ ಮೊದಲ ಸ್ಥಾನದಲ್ಲಿದ್ದ.ಆದರೆ ಇದ್ದಕ್ಕಿದ್ದಂತೆ 20ಕ್ಕೇರುವಲ್ಲಿ ಮತ್ತೊಬ್ಬರು ಪೈಪೋಟಿ ನೀಡುವುದನ್ನು ಕಂಡ.ಅದಕ್ಕಾಗಿ 3 ಕೊಲೆ ಮಾಡಿ 21ಕ್ಕೇರಿಸಿಕೊಂಡ.ನೀನು ಯೋಚನೆಯನ್ನು ನಿಲ್ಲಿಸುವುದು ಒಳ್ಳೆಯದು.ಇಲ್ಲಿ ನೋ ಮನಿ, ನೋ ಸೆಕ್ಸ್..ಪ್ರತೀಕಾರವಿಲ್ಲ.ಕೇವಲ ಸ್ಥಾನಕ್ಕಾಗಿ ನಂಬರ್ ವನ್ ಪಟ್ಟಕ್ಕಾಗಿ.."
"ಇದೆಲ್ಲಾ ನನಗ್ಯಾಕೆ ಹೇಳ್ತಿದ್ದೀಯಾ.."??
"ಯಾಕಂದ್ರೆ ನಾನೂ ಈ ರೇಸ್ ನಲ್ಲಿದ್ದೇನೆ.."
"ಅಂದ್ರೆ ಅದರ ಅರ್ಥ."?
"ಕಳೆದ ೫ ವರ್ಷಗಳಲ್ಲಿ ೬೦ ಮಂದಿ ಕಾಣೆಯಾಗಿದ್ದಾರೆ.ಕೇವಲ ೨೦ ಜನ ಸಯನೈಡ್ ಗೆ ಬಲಿಯಾದವರು.ಹಾಗಾದ್ರೆ ಉಳಿದವರು.."?
"ನೀನು.."?
"ಇಲ್ಲ, ಕಳೆದ ತಿಂಗಳವರೆಗೆ ೨೧, ನಾನು ಮತ್ತೆ ಡೆವಿಲ್ ಸಮನಾಗಿದ್ದೆವು,ಈಗ ಏನಾಗುತ್ತೆ ಗೊತ್ತಾ.."?
"ಡೆವಿಲ್ ಮೊದಲನೇ ಸ್ಥಾನಕ್ಕಾಗಿ ಮತ್ತೆ ಕೊಲೆ ಮಾಡಲು ಶುರು ಮಾಡ್ತಾನೆ."
"ಖಂಡಿತವಾಗಿಯೂ" ಆತ ಅಂದ.
" ಇಬ್ಬರಲ್ಲೊಬ್ಬರು ನಿಲ್ಲಿಸುವವರೆಗೆ ಈ ಕೊಲೆ ಸರಣಿ ಮತ್ತೆ ಮುಂದುವರಿಯುತ್ತೆ.ಆ ಡೆವಿಲ್ ನ ಕೊಲ್ಲುವುದು ಬಹಳ ಆಸಕ್ತಿದಾಯಕವಾಗಿರಬಹುದು.ನಾನು ಪ್ರತಿಕ್ಷಣವನ್ನು ಆಸ್ವಾದಿಸುತ್ತ ಕಾದು ನೋಡಬೇಕೆಂದಿದ್ದೇನೆ.ಅವನ ಮುಂದಿನ ನಡೆ ಏನಿರಬಹುದು ? ತುಂಬಾ ಕಾತರನಾಗಿದ್ದೇನೆ."
"ನಿಜವಾಗಿಯೂ.., ಟಾಪ್ ವನ್ ಆಗಲು ಅವನು ಯೋಚಿಸುತ್ತಿದ್ದಾನೆ ,ಬಹುಶಃ ಅವನಿಗೆ ನಿನ್ನ ಬಗ್ಗೆ ಆಸಕ್ತಿಯಿರಬಹುದು."ಅಂದಳು ಆಕೆ
"ಈಗ ನೀನು ಯೋಚಿಸಿ ಮಾತಾಡುತ್ತಿದ್ದೀಯಾ "ಅಂದ ಅವಳ ಭುಜ ತಟ್ಟುತ್ತಾ..
"ಅವನು ಕೈಗೆ ಸಿಗಲ್ಲ ಅಂತ ಹೇಳ್ತಿಯಾ"?
"ಬಹುಶಃ ಅವನು ಪೋಲೀಸ್ ಆಗಿದ್ದರೆ..."ಅಂದಳು
"ಅದು ಅನುಮಾನ."
"ಅಥವಾ ಅವನು ಯಾರಾದರೂ ಸಾಮಾನ್ಯ ಮನುಷ್ಯನಾಗಿರಬಹುದು, ಯಾವುದಾದರೂ ಉದ್ಯೋಗ ಮಾಡುತ್ತಿರಬಹುದು.ಬ್ಯಾಂಕರ್, ಪೋಸ್ಟ್ ಮ್ಯಾನ್ ಅಥವಾ......."
"ಅಥವಾ ಏನು.."??ಪ್ರಶ್ನಿಸಿದ
"ಒಂದು ರೀತಿ ಕಲೆಗಾರನೇ ಇರಬಹುದು, ಆಗಾಗ ತನ್ನ ವೇಷ ಬದಲಾಯಿಸುತ್ತಿರಬಹುದು."
"ನಡೀ..ಇಲ್ಲಿಂದ.."ಅಬ್ಬರಿಸಿದ
"ನಿನ್ನ ಹತ್ರ ಬಂದೂಕು ಇದೆಯಾ? ಪ್ಲೀಸ್ ಶೂಟ್ ಮಾಡ್ಬೇಡ..." ಆಕೆ ಚೀರಿದಳು
"ನಿಲ್ಲಿಸು.. ನನ್ನ ಹತ್ರ ಗನ್ ಇಲ್ಲ.ನನಗೆ ನಿನ್ನ ಕೊಲ್ಲಬೇಕಾಗಿಲ್ಲ.,ನಾವು ಡೆವಿಲ್ ಬಗ್ಗೆ ಮಾತಾಡೋಣ.."
"ನೀನಂದಿದ್ದೇ ಸರಿ.ಇಲ್ಲಿ ಟಾಪ್ ವನ್ ಗಾಗಿ ಪೈಪೋಟಿ ಇದೆ.ಪ್ರಾಯಶಃ ಅವನು ನಿನ್ನನ್ನು ಫಾಲೋ ಮಾಡುತ್ತಿರಬಹುದು, ನಿಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಿರಬಹುದು."ಅಂದಳು ಆಕೆ
ಕಾರು ಒಂದೇ ವೇಗದಲ್ಲಿ ಚಲಿಸುತ್ತಿತ್ತು
"ನಿನ್ನ ನಿತ್ಯದ ಚಟುವಟಿಕೆಗಳ ಬಗ್ಗೆ ಅವನಿಗೆ ಬೇಕಾದಷ್ಟು ಮಾಹಿತಿ ಇದೆ ಅನ್ನಿಸುತ್ತೆ, ನೀನು ಕೆಲಸ ಮಾಡುವ ರೀತಿ, ನೀನು ಜನರನ್ನು ಆರಿಸುವ ರೀತಿ, ನಿನ್ನ ಬೇಕು ಬೇಡಗಳ ಬಗ್ಗೆ, ಹೀಗೆ ಪೂರ್ತಿ ಚಿತ್ರಣವೇ ಇರಬಹುದು ಅವನ ಬಳಿ."
"ಆಮೇಲೆ...."
"ನನ್ನದೊಂದು ಸಿದ್ಧಾಂತ ಇದೆ.."
"ಸಿದ್ಧಾಂತ..."?? ತಾಳ್ಮೆ ಕಳೆದುಕೊಂಡು ಅರಚಿದ
"ಆ ಡೆವಿಲ್ ಮನುಷ್ಯನೇ ಆಗಿರದಿದ್ದರೆ.."?
"ಅಂದ್ರೆ ನೀನು ಹೇಳುವುದು..ಆತ ದೆವ್ವ ಅಥವಾ ಬೇರೇನೋ..??
"ನಿನ್ನನ್ನೂ ಸೇರಿಸಿ ಎಲ್ಲರೂ ಆತ ಒಬ್ಬ ಪುರುಷನೆಂದೇ ತಿಳಿದು ಕಾಯುತ್ತಿದ್ದಾರೆ.ಆದ್ರೆ ಆ ಡೆವಿಲ್ ಒಬ್ಬ ಹೆಣ್ಣಾಗಿದ್ದರೆ? ಇತ್ತ ಪೋಲೀಸರು ಕೂಡಾ ಹೊಂಚು ಹಾಕಿ ಕಾಯುತ್ತಿದ್ದರೆ, ಆಕೆ ಸುಲಭವಾಗಿ ಕೊಲೆ ಮಾಡಿ ಮುಗಿಸುತ್ತಿದ್ದಾಳೆ.ಅವಳಿಗೆ ನಿನ್ನ ಬಗ್ಗೆ ಗೊತ್ತು ,ನಿನ್ನ ಬಗ್ಗೆ ಮಾಹಿತಿಯಿದೆ.ನೀನು ಕೊಲೆ ಮಾಡುವಾಗ ತೆಗೆದ ಚಿತ್ರಗಳು ಅವಳ ಬಳಿ ಇವೆ".
ಆಕೆ ಕನಸಲ್ಲಿ ಮಾತಾಡುತ್ತಿರುವಂತೆ ಭಾಸವಾಯಿತು ಅವನಿಗೆ.
"ಇನ್ನು ಕಾಯುವುದು ಸಾಧ್ಯವಿಲ್ಲ ಎಂದು ತಿಳಿದ ಆಕೆ ಕೊನೆಗೂ ನಿರೀಕ್ಷೆಯ ಆ ಕಡೇ ದಿನವನ್ನು ನಿರ್ಧರಿಸಿದಳು..ಬಲೆ ಬೀಸುವವಳಂತೆ ನಿನ್ನ ದಾರಿಗಾಗಿ ಕಾದು ಕುಳಿತಳು, ಮತ್ತೆ ನಿನ್ನೊಂದಿಗೆ ಪ್ರಯಾಣಕ್ಕಾಗಿ ಒಂದು ಅವಕಾಶ ಕೇಳಿದಳು."
ಕಾರು ಸಡನ್ನಾಗಿ ನಿಂತಿತು, ಈಗ ಆತ ಹೆದರಿ ಬಿಟ್ಟಿದ್ದ.
ಹೊರಗಡೆ ನೋಡಿದರೆ ಒಂದೆಡೆ ಪ್ರಪಾತ ಕಾಣುತ್ತಿತ್ತು.ಇನ್ನೊಂದೆಡೆ ಮರಗಳು ಅಲ್ಲಾಡುವಂತೆ ಜೋರಾಗಿ ಗಾಳಿ ಬೀಸುತ್ತಿತ್ತು.ಆದರೆ ಕಾರಿನ ಕಿಟಕಿ ಬಾಗಿಲುಗಳು ಭದ್ರವಾಗಿ ಮುಚ್ಚಿದ್ದರಿಂದ ಒಳಗೆ ಅದರ ಅನುಭವವಾಗುತ್ತಿರಲಿಲ್ಲ.
ಕೆಲ ಹೊತ್ತು ಅಲ್ಲಿ ಮೌನ ಆವರಿಸಿತ್ತು.
ಅಷ್ಟರಲ್ಲಿ ಆಕೆ ಅವನ ಕೆನ್ನೆಗೆ ಗುರಿಯಿಡುತ್ತಾ "ಕೆಲವು ನಿಮಿಷಗಳ ಹಿಂದೆ ನಿನ್ನ ಬಳಿ ಈಗ ಗನ್ ಇಲ್ಲ ಎಂಬುದನ್ನು ನೀನೇ ಸುಲಭವಾಗಿ ಒಪ್ಪಿಕೊಂಡು ಬಿಟ್ಟೆ,ಆದರೆ ನನ್ನ ಈ ಸಣ್ಣ ಹ್ಯಾಂಡ್ ಬ್ಯಾಗ್ ನಲ್ಲಿ ಅದು ಈಗಲೂ ಇದೆ..!"ಅನ್ನುವಾಗ ಆಕೆಯ ಮುಖದಲ್ಲಿ ನಗುವಿತ್ತು..!
                   
                 *******************************