ಕತ್ತಲು ಎಂದರೆ ಅವ್ಯಕ್ತ ಭಯ
ಬೆಳಕೆಂದರೆ ಭರವಸೆ,ಅಭಯ
ಕತ್ತಲು ಎಂದರೆ ಕರಾಳ
ಬೆಳಕೆಂದರೆ ನಿರಾಳ
ಕತ್ತಲು ಎಂದೊಡನೆ ನೀರವ ಮೌನ
ಬೆಳಕೆಂದರೆ ಹೊಸ ಆಶಾ ಕಿರಣ
******
ಅಂಧಕಾರದ ಇರುಳಿನಲ್ಲಿ
ದೀಪ ಬೆಳಕ ತೋರುವವರು
ಇರುವರು ಬೆರಳೆಣಿಕೆಯಲ್ಲಿ
ಜೀವನದಲ್ಲಿ ನೆನಪಿಟ್ಟುಕೊಳ್ಳಿ
ಬದುಕ ಸುಟ್ಟು ಬಿಡಲು
ಬತ್ತಿಯಿಡುವವರು
ಕೊಳ್ಳಿಯಿಡುವವರೇ ಹೆಚ್ಚು ಇಲ್ಲಿ!!
*****
ಇಲ್ಲಿ ಎಲ್ಲವೂ ನಿಜವಲ್ಲ
ಅವರವರ ಭಾವಕ್ಕೆ
ಅವರವರ ದೃಷ್ಟಿಗೆ
ಸುಟ್ಟು ಬೂದಿಯಾಗಿಸುವ
ಕೆನ್ನಾಲಿಗೆಯ ಬೆಂಕಿಯ ಜ್ವಾಲೆ
ಹೊಳೆಯುವ ಬೆಳಕಿನಂತೆ
ದೂರದಿಂದ ಈ ಕಣ್ಣಿನ ದೃಷ್ಟಿಗೆ..!
*****
ಕಂಡದ್ದೆಲ್ಲವೂ ಪಡೆವ ಬಯಕೆ
ದುರಾಸೆ,ದುರಾಲೋಚನೆಗಳೇ
ಸುಟ್ಟು ಬಿಡುವುದು ನಮ್ಮನ್ನು
ಬೇಕಿದ್ದರೆ ನೋಡಿ..
ಬೆಳಕ ಕಂಡೊಡನೆ ದೀಪಕ್ಕೆ ಮುತ್ತಿಟ್ಟು
ಸುಟ್ಟು ಸತ್ತು ಬಿಡುವ ಪತಂಗವನ್ನು !!
*****
ಗೆಳತೀ ನೀ ಹಚ್ಚಿಟ್ಟು
ಹೋದೆಯಲ್ಲಾ ಪ್ರೀತಿ ಹಣತೆ
ಹೃದಯದಲ್ಲಿ
ನನಗೀಗ ಬಾಳಲ್ಲಿ
ನಿತ್ಯ ದೀಪಾವಳಿ..!
******
ಹುಡುಗೀ...
ಈ ಉರಿವ ಹಣತೆ
ಈ ಸಾಲು ದೀಪ
ಎಲ್ಲ ನಮಗೆ ಯಾಕೆ ಬೇಕು?
ನಿತ್ಯ ಹೀಗೇ..
ಇದ್ದರೆ ಸಾಕು
ಮನೆ ಮನ ಬೆಳಗಲು
ನಿನ್ನ ಕಣ್ಣ ಬೆಳಕು..!
******
ಒಂದಷ್ಟು ದೀಪ ಹಚ್ಚಲು
ಮೂಡಿತು ಬೆಳಕು
ಮನೆಯ ಸುತ್ತಲೂ
ಆಗೊಮ್ಮೆ ಕಣ್ಣು ಮುಚ್ಚಲು
ಎಲ್ಲೆಲ್ಲೂ ಕತ್ತಲು !
ಅರಿವಾಯಿತು ಸತ್ಯ
ಮನೆಯಲಿದ್ದರಷ್ಟೆ ಸಾಲದು ಬೆಳಕು
ನಮ್ಮ ಮನದಲ್ಲಿರಬೇಕು !
*****
ಬೇರೊಬ್ಬರ ಒಳಿತನ್ನು ಕಂಡು
ಉರಿಯುವ ಬದಲು
ಕತ್ತಲಲ್ಲಿದ್ದವರ ಬದುಕಲ್ಲಿ
ಮೊದಲು
ನಮ್ಮಿಂದ ಒಂದಿಷ್ಟು
ಬೆಳಕಾದರೆ ಅಷ್ಟೇ ಸಾಕು..!
******
ಎಲ್ಲಿಂದಲೋ ದೂರದಿಂದ
ಆ ಸೂರ್ಯ ಚಂದ್ರ
ಪ್ರತಿಫಲವಿಲ್ಲದೆ
ನೀಡುವರು ಭೂಮಿಗೆ ಬೆಳಕು
ಇಲ್ಲಿ ನಮ್ಮೊಡನಿದ್ದವರೇ
ಕಾಯುವರು ಕತ್ತಲಾಗಲು
ನಮ್ಮ ಬದುಕು.
*******
ಉರಿವ ಬೆಂಕಿಯಲ್ಲಿ
ಚಳಿಯ ಕಾಯಿಸುವರು
ಬೇಳೆ ಬೇಯಿಸುವರು ಕೆಲವರು
ಹಚ್ಚಿ ದ್ವೇಷ ಸಂಶಯದ ಕಿಡಿ
ಕಿಚ್ಚು ಹೆಚ್ಚುವ ಬದಲಿಗೆ
ಬೆಳಕಾಗಲಿ ಕತ್ತಲಲ್ಲಿ
ಒಂದು ಹಣತೆ ಹಚ್ಚಿ ಬಿಡಿ.
*****